ಟೀ ಆಯ್ತು, ಟೊಮೆಟೊ ಆಯ್ತು ಈಗ ಪಾನ್ ಸರದಿ- ಪಾಕ್ ಜೊತೆ ವ್ಯವಹಾರ ಕೈಬಿಡಲು ನಿರ್ಧಾರ

ನವದೆಹಲಿ: ಪುಲ್ವಾಮಾ ದಾಳಿಯ ಪ್ರತಿಕಾರವನ್ನು ಮಂಗಳವಾರ ವಾಯುಪಡೆ ಏರ್ ಸ್ಟ್ರೈಕ್ ಮಾಡಿವ ಮೂಲಕ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ ತೀರಿಸಿಕೊಂಡಿತ್ತು. ಒಂದೆಡೆ ಐಎಎಫ್ ಸರ್ಜಿಕಲ್ ದಾಳಿ ನಡೆಸಿದರೆ ಇನ್ನೊಂದೆಡೆ ಭಾರತೀಯ ರೈತರು ಹಾಗೂ ವ್ಯಾಪಾರಿಗಳು ಪಾಕ್ ಜೊತೆ ಯಾವುದೇ ವ್ಯವಹಾರ ಸಂಬಂಧ ಬೇಡ, ಪಾಕಿಸ್ತಾನಕ್ಕೆ ನಾವು ಬೆಳೆದ ಬೆಳೆಗಳನ್ನು ರಫ್ತು ಮಾಡಲ್ಲ ಅಂತ ಪಟ್ಟು ಹಿಡಿದಿದ್ದಾರೆ.

ಪತ್ರಿಕೆಯೊಂದರ ವರದಿ ಪ್ರಕಾರ ಮಧ್ಯಪ್ರದೇಶದ ವೀಳ್ಯದೆಲೆ ಬೆಳೆಗಾರರು ಪಾಕಿಸ್ತಾನದ ಜತೆಗಿನ ವ್ಯಾಪಾರವನ್ನು ಕೈಬಿಡಲು ನಿರ್ಧರಿಸಿದ್ದಾರೆ. ಈ ಹಿಂದೆ ಮಧ್ಯ ಪ್ರದೇಶದ ಟೀ ವ್ಯಾಪಾರಿಗಳು ಮತ್ತು ಟೊಮೆಟೊ ಬೆಳೆಗಾರರು ಪಾಕಿಸ್ತಾನದೊಂದಿಗೆ ತಮ್ಮ ವ್ಯಾಪಾರ ಸಂಬಂಧಗಳನ್ನು ಸ್ಥಗಿತಗೊಳಿಸಿದ ಬಳಿಕ ವೀಳ್ಯದೆಲೆ ವ್ಯಾಪಾರಿಗಳು ಕೂಡ ವ್ಯವಹಾರ ನಿಲ್ಲಿಸಲು ನಿರ್ಧಾರ ಮಾಡಿದ್ದಾರೆ.

ಮಧ್ಯಪ್ರದೇಶದ ಛತ್ತಾರ್‍ಪುರ ಜಿಲ್ಲೆಯ ಮಹಾರಾಜ್‍ಪುರ, ಗರ್ಹಿಮಾಲಹ್ರಾ, ಪಿಪಟ್ ಮತ್ತು ಪನಾಗರ್ ಪ್ರದೇಶಗಳು ವೀಳ್ಯದೆಲೆ ಬೆಳೆಗೆ ಹೆಸರುವಾಸಿ. ಇಲ್ಲಿನ ಮಹೊಬಾ ಪಾನ್‍ಗೆ(ವೀಳ್ಯದೆಲೆ) ಪಾಕಿಸ್ತಾನದಲ್ಲಿ ಭಾರೀ ಬೇಡಿಕೆ ಇದ್ದು, ಮೀರತ್ ಮತ್ತು ಶಹರಾನ್‍ಪುರ ಮೂಲಕ ಪಾನ್‍ಗಳನ್ನು ಪಾಕಿಸ್ತಾನಕ್ಕೆ ರಫ್ತು ಮಾಡಲಾಗುತ್ತಿತ್ತು. ಆದ್ರೆ ವೀಳ್ಯದೆಲೆ ರಫ್ತು ಸ್ಥಗಿತಗೊಳಿಸುವುದರಿಂದ ವ್ಯಾಪಾರಿಗಳಿಗೆ ಸುಮಾರು 13-15 ಲಕ್ಷ ನಷ್ಟವಾಗುತ್ತದೆ. ಆದರೆ ಈ ನಷ್ಟದ ಬಗ್ಗೆ ನಮಗೆ ಚಿಂತೆ ಇಲ್ಲ. ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ನೀರು ಹರಿಸುವುದಿಲ್ಲ ಎಂದು ನಿರ್ಧರಿಸಿರುವಾಗ ನಾವ್ಯಾಕೆ ವೀಳ್ಯದೆಲೆ ರಫ್ತು ಮಾಡುವುದನ್ನು ನಿಲ್ಲಿಸಬಾರದು ಎಂದು ಪಾನ್ ಬೆಳೆಗಾರರು ಹೇಳಿದ್ದಾರೆ.

ಭಾರತದಿಂದ ಪಾಕಿಸ್ತಾನಕ್ಕೆ ಚಹಾ, ಟೊಮೆಟೊ ಹಾಗೂ ಹಲವು ತರಕಾರಿಗಳನ್ನು ರಫ್ತು ಮಾಡುವುದಿಲ್ಲ. ವ್ಯಾಪಾರಕ್ಕಿಂತ ದೇಶ ಮುಖ್ಯ ಎಂದು ಪುಲ್ವಾಮಾ ದಾಳಿ ನಡೆದ ಬಳಿಕ ಭಾರತೀಯ ರೈತರು, ವ್ಯಾಪಾರಿಗಳು ಹಾಗೂ ರಫ್ತುದಾರರು ಪಾಕ್ ಜೊತೆ ಇದ್ದ ವ್ಯವಹಾರವನ್ನು ಸ್ಥಗಿತಗೊಳಿಸಿ ಆಕ್ರೋಶ ಹೊರಹಾಕಿದ್ದರು. ಇದೇ ಬೆನ್ನಲ್ಲೇ ಸದ್ಯ ಪಾನ್(ವೀಳ್ಯದೆಲೆ) ವ್ಯಾಪಾರಿಗಳು ಕೂಡ ಪಾಕಿಸ್ತಾನದ ಜೊತೆ ವ್ಯವಹಾರ ನಡೆಸಲ್ಲ ಅಂತ ಪಟ್ಟು ಹಿಡಿದಿದ್ದಾರೆ. ನಮ್ಮ ಆಹಾರವನ್ನೇ ತಿಂದು, ನಮ್ಮ ಮೇಲೆಯೇ ದಾಳಿ ಮಾಡ್ತಾರೆ ಅಂತ ಕಿಡಿಕಾರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *