ಮಹಾಮಳೆಯ ಬಳಿಕ ದಕ್ಷಿಣ ಕಾಶ್ಮೀರದಲ್ಲಿ ಪ್ರವಾಸಿಗರ ದಂಡು!

ಮಡಿಕೇರಿ: ಪ್ರವಾಸಿಗರ ನೆಚ್ಚಿನ ತಾಣ ಮಂಜಿನ ನಗರಿ ಕಡೆಗೆ ಪ್ರವಾಸಿಗರು ನಿಧಾನವಾಗಿ ದಾಪುಗಾಲು ಇಡಲು ಆರಂಭಿಸಿದ್ದಾರೆ. ಮಳೆಗಾಲದಲ್ಲಿ ಮಹಾಮಳೆಯಿಂದ ಕರುನಾಡ ಕಾಶ್ಮೀರದ ಸೌಂದರ್ಯವನ್ನು ಮಿಸ್ ಮಾಡಿಕೊಂಡಿದ್ದ ಟೂರಿಸ್ಟ್ ಗಳು ಚಳಿಗಾಲದ ಹಿತವನ್ನು ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ಟೂರಿಸ್ಟ್ ಸ್ಪಾಟ್ ಗಳಿಗೆ ತೆರಳಿ ರಜಾ ದಿನಗಳನ್ನು ಮಸ್ತಿ ದಿನಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಸೊರಗಿ ಹೋಗಿದ್ದ ಕೊಡಗು ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಬಂದಂತೆ ಆಗಿದೆ.

ಕೊಡಗು ಕರ್ನಾಟಕದ ಮಟ್ಟಿಗೆ ಅದೊಂದು ಕಾಶ್ಮೀರ. ಪುಟ್ಟ ಜಿಲ್ಲೆಯಾದರೂ ತನ್ನ ಪ್ರಕೃತಿ ಸೌಂದರ್ಯ, ಜಲಪಾತಗಳಿಂದಲೇ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಆದರೆ ಈ ಬಾರಿ ಸುರಿದ ಮಹಾಮಳೆ ಕೊಡಗಿನಲ್ಲಿ ಅಕ್ಷರಶಃ ಪ್ರಳಯವನ್ನೇ ಸೃಷ್ಟಿಸಿಬಿಟ್ಟಿತ್ತು. ಇದರಿಂದ ಮಳೆ ನಡುವೆ ಕೊಡಗಿನ ಸೌಂದರ್ಯ ಸವಿಯೋ ಆಸೆಯಲ್ಲಿದ್ದ ಪ್ರಕೃತಿ ಪ್ರಿಯರಿಗೆ ಭಾರೀ ನಿರಾಸೆ ಉಂಟಾಗಿತ್ತು. ಇದೀಗ ಚಳಿಗಾಲದಲ್ಲಾದರೂ ಮಂಜಿನ ನಗರಿಯಲ್ಲಿ ಸಂಭ್ರಮಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಶೈಕ್ಷಣಿಕ ಪ್ರವಾಸದ ಹೆಸರಲ್ಲಿ ವಿದ್ಯಾರ್ಥಿಗಳು, ಕೆಲಸದಿಂದ ರಿಲೀಫ್ ಪಡೆಯುವ ಸಲುವಾಗಿ ಉದ್ಯೋಗಿಗಳು ಮಂಜಿನ ನಗರಿಗೆ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿ ಮಡಿಕೇರಿಯ ರಾಜಾಸೀಟ್, ದುಬಾರೆಯ ಜಂಗಲ್ ಮಸ್ತಿ, ಕುಶಾಲನಗರದ ನಿಸರ್ಗಧಾಮದಲ್ಲಿ ಪ್ರವಾಸಿಗರ ಎಂಜಾಯ್‍ಮೆಂಟ್ ಜೋರಾಗಿದೆ. ಇದರಿಂದ ಪ್ರಳಯದಿಂದ ಕಂಗೆಟ್ಟಿದ್ದ ಹೊಟೆಲ್- ರೆಸ್ಟೋರೆಂಟ್‍ಗಳಿಗೂ ಆಕ್ಸಿಜನ್ ಸಿಕ್ಕಂತಾಗಿದೆ. ಮಹಾಮಳೆಗೆ ಸಿಕ್ಕಿ ತತ್ತರಿಸಿದ್ದ ಕೊಡಗು ಇದೀಗ ಸಹಜ ಸ್ಥಿತಿಗೆ ಬರುತ್ತಿದ್ದು, ಪ್ರವಾಸೋದ್ಯಮ ಮೊದಲಿಂತಾಗುತ್ತಿರುವುದು ಎಲ್ಲರಿಗೂ ಖುಷಿ ತಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *