ಪ್ರಿನ್ಸಿಪಾಲ್ ರನ್ನೇ ಗುಂಡಿಟ್ಟು ಕೊಂದ 12ನೇ ತರಗತಿ ವಿದ್ಯಾರ್ಥಿ

ಚಂಡೀಗಢ: ಖಾಸಗಿ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಪ್ರಿನ್ಸಿಪಾಲ್ ರನ್ನು ಗುಂಡಿಟ್ಟು ಕೊಲೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಯಮುನಾ ನಗರದಲ್ಲಿ ನಡೆದಿದೆ.

ರಿತು ಛಾಬ್ರಾ ಎಂಬವರು ಕೊಲೆಯಾದ ಪ್ರಿನ್ಸಿಪಾಲ್. ಯಮುನಾ ನಗರದ ವಿವೇಕಾನಂದ ಖಾಸಗಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಬೆಳಗ್ಗೆ 11.30ರ ವೇಳೆಯಲ್ಲಿ ನೇರ ಪ್ರಿನ್ಸಿಪಾಲರ ಕೊಠಡಿಗೆ ಆಗಮಿಸಿದ ವಿದ್ಯಾರ್ಥಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ವಿದ್ಯಾರ್ಥಿ ಗುಂಡು ಹಾರಿಸಿದ್ದರಿಂದ 3 ಬುಲೆಟ್‍ಗಳು ತಾಗಿ ಗಂಭೀರವಾಗಿ ಗಾಯಗೊಂಡ ಛಾಬ್ರಾ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗುಂಡು ಹಾರಿಸಿದ ಬಳಿಕ ವಿದ್ಯಾರ್ಥಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಶಾಲೆಯ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ಎಸ್‍ಪಿ ರಾಜೇಶ್ ಕಲಿಯಾ ತಿಳಿಸಿದ್ದಾರೆ.

ಪ್ರಿನ್ಸಿಪಾಲರ ಮೇಲೆ ಗುಂಡು ಹಾರಿಸಿದ ವಿದ್ಯಾರ್ಥಿ 12ನೇ ತರಗತಿ ವಿದ್ಯಾರ್ಥಿಯಾಗಿದ್ದು, ಹಾಜರಾತಿ ಕಡಿಮೆ ಹೊಂದಿದ್ದ. ಅಲ್ಲದೇ ತರಗತಿಯ ಇತರೆ ವಿದ್ಯಾರ್ಥಿಗಳ ಜೊತೆ ಜಗಳವಾಡುತ್ತಿದ್ದ ಕಾರಣ ಆತನನ್ನು 15 ದಿನಗಳ ಹಿಂದೆ ಪ್ರಿನ್ಸಿಪಾಲರು ಶಾಲೆಯಿಂದ ಅಮಾನತು ಮಾಡಿದ್ದರು ಎಂದು ಶಾಲೆಯ ಸಿಬ್ಬಂದಿ ತಿಳಿಸಿದ್ದಾರೆ. ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ ಗುರಗಾಂವ್ ನ ರಯಾನ್ ಇಂಟರ್‍ನ್ಯಾಷನಲ್ ಶಾಲೆಯ 11ನೇ ತರಗತಿಯ ವಿದ್ಯಾರ್ಥಿ 2ನೇ ತರಗತಿ ಬಾಲಕನನ್ನು ಶಾಲೆಯ ಟಾಯ್ಲೆಟ್‍ನಲ್ಲಿ ಕತ್ತು ಸೀಳಿ ಕೊಲೆ ಮಾಡಿದ್ದ.

Comments

Leave a Reply

Your email address will not be published. Required fields are marked *