25 ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ವ್ಯಕ್ತಿಯನ್ನು ಗೂಡು ಸೇರಿಸಿದ ಪಬ್ಲಿಕ್ ಹೀರೋ

ಉಡುಪಿ: ಬರೋಬ್ಬರಿ 25 ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ವ್ಯಕ್ತಿಯನ್ನು ಇಂದು ನಮ್ಮ ಪಬ್ಲಿಕ್ ಹೀರೋ ಗೂಡು ಸೇರುವಂತೆ ಮಾಡಿದ್ದಾರೆ.

ಅಶೋಕ್ ಉಡುಪಿ ನಗರದ ಪಣಿಯಾಡಿ ಮೂಲದ ನಿವಾಸಿ. ಅಶೋಕ್ ಮನೆಯಿಂದ ದೂರವಾಗಿ 25 ವರ್ಷಗಳೇ ಕಳೆದಿವೆ. ಒಂದು ದಿನ ಮನೆಯಿಂದ ತೆರಳಿದವರು ಮತ್ತೆ ಊರಿಗೆ ಬಂದಿರಲಿಲ್ಲ. ಎಲ್ಲಿದ್ದರು ಎನ್ನುವುದು ಯಾರಿಗೂ ಗೊತ್ತಿಲ್ಲ. ಊರೂರು ಸುತ್ತಿ 15 ದಿನಗಳ ಹಿಂದೆ ಅಶೋಕ್ ಉಡುಪಿಯ ಕೃಷ್ಣ ಮಠಕ್ಕೆ ಬಂದಿದ್ದರು. ಮಠಕ್ಕೆ ಬರುವ ಭಕ್ತರು ಕೊಟ್ಟ ಹಣ, ತಿಂಡಿ ತಿಂದು ಜೀವನ ಸಾಗಿಸುತ್ತಿದ್ದರು. ಇಷ್ಟಾಗುವಾಗ ನಮ್ಮ ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು ಅವರ ಕಣ್ಣಿಗೆ ಅಶೋಕ್ ಕಂಡಿದ್ದಾರೆ. ಕೂಡಲೇ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

 

ವೈದ್ಯರು ಟ್ರೀಟ್‍ಮೆಂಟ್ ಎಲ್ಲ ಶುರು ಮಾಡಿದ್ದಾರೆ. ಟ್ರೀಟ್‍ಮೆಂಟ್ ಆಗುತ್ತಿದ್ದಂತೆ ಅಶೋಕ್ ಗೆ ಹಳೆಯದ್ದೆಲ್ಲ ನೆನಪಾಗಿದೆ. ತನ್ನ ಊರು ಮತ್ತೆ ಕುಟುಂಬದ ಬಗ್ಗೆ ಮಾಹಿತಿ ನೀಡಿದ್ದಾರೆ. ನಿತ್ಯಾನಂದ ಒಳಕಾಡು ಭಾವಚಿತ್ರ ತೆಗೆದು ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲಾತಾಣದಲ್ಲಿ ಹಾಕಿದ್ದಾರೆ. ಫೋಟೋ ವೈರಲ್ ಆಗುತ್ತಿದ್ದಂತೆ ಅಶೋಕ್ ಅವರ ಮಕ್ಕಳು ಮುಂಬೈ ಮತ್ತು ಬೆಂಗಳೂರಿನಿಂದ ಓಡೋಡಿ ಬಂದಿದ್ದಾರೆ.

ನಿತ್ಯಾನಂದ ಒಳಕಾಡು ಮತ್ತು ಟೀಮ್ ಉಡುಪಿಯಲ್ಲಿರುವ ಇವರ ಮನೆಯನ್ನ ಪತ್ತೆ ಮಾಡಿದ್ದಾರೆ. 25 ವರ್ಷದ ನಂತರ ಅಶೋಕ್ ತನ್ನ ಮನೆಯನ್ನು ಸೇರಿದ್ದಾರೆ. ಕಳೆದೆ ಹೋಗಿದ್ದಾರೆ ಎಂದು ಅಂದುಕೊಂಡಿದ್ದ ಮಕ್ಕಳಿಗೆ ಅಪ್ಪ ಸಿಕ್ಕ ಖುಷಿಯಾಗಿದೆ. ಅಶೋಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ವಾಟ್ಸಾಪ್-ಫೇಸ್ಬುಕ್ 3 ಮಕ್ಕಳಿಗೆ ಅಪ್ಪನನ್ನ ಹುಡುಕಿಕೊಟ್ಟಿದೆ. ಮಡದಿಗೆ ಗಂಡನನ್ನ ಹುಡುಕಿಕೊಟ್ಟಿದೆ. ನಮ್ಮ ಪಬ್ಲಿಕ್ ಹೀರೋ ಕುಟುಂಬವನ್ನ ಒಂದು ಮಾಡಿದ್ದಾರೆ.

Comments

Leave a Reply

Your email address will not be published. Required fields are marked *