ಕಾಬೂಲ್‍ನ ಗುರುದ್ವಾರದ ಮೇಲೆ ಉಗ್ರರ ದಾಳಿ- 11 ಮಂದಿ ಸಾವು

– 16ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನಲ್ಲಿ ಉಗ್ರರು ಬುಧವಾರ ಗುರುದ್ವಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 11 ಭಕ್ತರು ಸಾವನ್ನಪ್ಪಿದ್ದು, 16ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿಖ್ ಸಮುದಾಯದ ನೂರಾರು ಜನರು ಪ್ರಾರ್ಥನೆ ಸಲ್ಲಿಸಲು ಬೆಳಗ್ಗೆ 7.30ರ ಸುಮಾರಿಗೆ ಕಾಬೂಲ್‍ನ ಗುರುದ್ವಾರಕ್ಕೆ ಆಗಮಿಸಿದ್ದರು. ಈ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಪರಿಣಾಮ ಸ್ಫೋಟದಲ್ಲಿ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಈ ಬೆನ್ನಲ್ಲೇ ಭದ್ರತಾ ಪಡೆಯು ಗುರುದ್ವಾರವನ್ನು ಮುತ್ತಿಗೆ ಹಾಕಿ ಪ್ರತೀಕಾರ ತೀರಿಸಿಕೊಂಡಿದೆ.

ದಾಳಿಯಲ್ಲಿ ಗಾಯಗೊಂಡ 16ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಈವರೆಗೂ ಯಾವುದೇ ಭಯೋತ್ಪಾದಕ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಅಫ್ಘಾನಿಸ್ತಾನದಲ್ಲಿ ಸುಮಾರು 300 ಸಿಖ್ ಕುಟುಂಬಗಳಿವೆ. ಅದರಲ್ಲೂ ಕಾಬೂಲ್ ಮತ್ತು ಜಲಾಲಾಬಾದ್‍ನಲ್ಲಿ ಸಿಖ್ ಸಮೂದಾಯದ ಜನರು ಹೆಚ್ಚಾಗಿದ್ದಾರೆ. ಈ ಎರಡು ನಗರಗಳಲ್ಲಿ ಗುರುದ್ವಾರಗಳಿವೆ.

ಈ ಕುರಿತು ಟ್ವೀಟ್ ಮಾಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಈ ದಾಳಿಗೆ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ. ನಾವು ದಾಳಿ ಮಾಡಲಿಲ್ಲ ಎಂದು ತಿಳಿಸಿದ್ದಾನೆ.

2018ರಲ್ಲಿ ಐಸಿಸ್ ದಾಳಿ:
ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತ ಸಿಖ್ಖರು ಮತ್ತು ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲೆ ಆಗಾಗ್ಗೆ ದಾಳಿಗಳು ನಡೆಯುತ್ತಲೇ ಇವೆ. ಇದಕ್ಕೂ ಮುನ್ನ 2018ರಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಭೇಟಿಯಾಗಲು ಹೊರಟಿದ್ದ ಹಿಂದೂಗಳು ಮತ್ತು ಸಿಖ್ಖರ ಬೆಂಗಾವಲು ಮೇಲೆ ಆತ್ಮಾಹುತಿ ದಾಳಿ ನಡೆದಿತ್ತು. ಈ ವೇಳೆ 19 ಸಿಖ್ಖರು ಮತ್ತು ಹಿಂದೂಗಳು ಮೃತಪಟ್ಟಿದ್ದರು. ಈ ದಾಳಿ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಹೊತ್ತುಕೊಂಡಿತ್ತು. ದಾಳಿಯಿಂದಾಗಿ ಸಿಖ್ ಮತ್ತು ಹಿಂದೂ ಸಮುದಾಯಗಳು ಭಯಭೀತರಾಗಿದ್ದಾರೆ. ಹೆಚ್ಚಿನ ಸಂಖ್ಯೆಯ ಸಿಖ್ಖರು ಮತ್ತು ಹಿಂದೂಗಳು ದೇಶವನ್ನು ತೊರೆಯಲು ನಿರ್ಧರಿಸಿದ್ದರು. ಮೂರು ವರ್ಷಗಳಲ್ಲಿ ಅನೇಕ ಸಂತ್ರಸ್ತರು ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *