ಅವರ ಕನಸನ್ನ ನನಸು ಮಾಡಬೇಕು ಅನ್ನೋ ಆಸೆಯಿದೆ – ಅಂಬಿ ನೆನೆದು ಭಾವುಕರಾದ ಸುಮಲತಾ

ಬೆಂಗಳೂರು: ಇಂದಿಗೆ ದಿವಂಗತ ಅಂಬರೀಶ್ ಅವರು ಅಗಲಿ ಮೂರು ತಿಂಗಳಾಗಿದೆ. ಈ ಹಿನ್ನೆಲೆಯಲ್ಲಿ ಸುಮಲತಾ ಮತ್ತು ಪುತ್ರ ಅಭಿಷೇಕ ಅಂಬರೀಶ್ ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅಂಬಿಯನ್ನ ನೆನೆದು ಸುಮಲತಾ ಅವರು ಕಣ್ಣೀರಿಟ್ಟಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಮಲತಾ ಅವರು, ಅಂಬರೀಶ್ ಹೋಗಿ ಮೂರು ತಿಂಗಳಾಯಿತು ಅಂದರೆ ನಂಬುವುದಕ್ಕೆ ಆಗುತ್ತಿಲ್ಲ. ಅಭಿಮಾನಿಗಳ ಪ್ರೀತಿಗೆ ನಾನೆಂದು ಚಿರಋಣಿ. ಇವತ್ತು ಮಗನಲ್ಲಿ ಜನರು ಅಂಬರೀಶ್ ಅವರನ್ನು ಕಾಣುತ್ತಿದ್ದಾರೆ ಎಂದು ಅಂಬಿಯನ್ನು ನೆನೆಸಿಕೊಂಡು ಸುಮಲತಾ ಭಾವುಕರಾಗಿದ್ದಾರೆ.

ನಾನು ಮಂಡ್ಯದಲ್ಲಿ ಸ್ಪರ್ಧಿಸುತ್ತಿರೋದು ಅಭಿಮಾನಿಗಳ ಒತ್ತಾಯದಿಂದಾಗಿ. ಅವರಿಗಾಗಿ ಏನೆಲ್ಲಾ ಮಾಡಬಹುದೋ ಅದನ್ನ ನಾನು ಮಾಡುತ್ತೀನಿ. ಅಂಬರೀಶ್ ಬಡವರಿಗೆ ಮನೆ ಕಟ್ಟಿಸಿ ಕೊಟ್ಟಿದ್ದರು. ಇನ್ನಷ್ಟು ಬಡವರಿಗೆ ಮನೆ ಕಟ್ಟಿಸಿ ಕೊಡಬೇಕು ಅನ್ನೋದು ಅಂಬಿ ಕನಸಾಗಿತ್ತು. ಆದರೆ ಅದನ್ನು ಯಾವ ರೀತಿ ಮುಂದುವರಿಸಿಕೊಂಡು ಹೋಗಬೇಕು ಎಂದು ಗೊತ್ತಿಲ್ಲ. ಆದರೂ ಆ ಕನಸನ್ನ ನನಸು ಮಾಡಲೇಬೇಕು ಅನ್ನೋದು ನನ್ನದೊಂದು ಕನಸಾಗಿದೆ. ಜನರಿಗೆ ನಾನು ಬೇಕು, ಪಕ್ಷ ಬೇಕಾಗಿಲ್ಲ ಎಂದು ಹೇಳಿದರು.

ಅಂಬಿಯನ್ನ ನೆನೆಸಿಕೊಳ್ಳದ ಕ್ಷಣವೇ ಇಲ್ಲ. ಅವರು ನಮ್ಮ ಜೊತೆ ಇಲ್ಲ ಅನ್ನೋ ನೋವು, ಪ್ರತಿಯೊಂದು ವಿಷಯ ಕಾಡುತ್ತಿದೆ. ಆದರೂ ಧೈರ್ಯ ತೆಗೆದುಕೊಳ್ಳಬೇಕು. ಚಿತ್ರರಂಗದಲ್ಲಿ ಅಂಬಿಯದ್ದು 45 ವರ್ಷದ ಸೇವೆಯಿದೆ. ಅವರಿಗೆ ಅಪಾರ ಅಭಿಮಾನಿಗಳ ಬಳಗವಿದೆ. ಮಂಡ್ಯ ಜನತೆ ಅಪಾರ ಪ್ರೀತಿ, ಅಭಿಮಾನ ಇಟ್ಟಿದ್ದಾರೆ. ಅವರ ಋಣವನ್ನು ನಾನು ತೀರಿಸಬೇಕಿದೆ. ರಾಜಕೀಯದ ಬಗ್ಗೆ ಏನೇ ತಿರ್ಮಾನವಾದರೂ ಅದು ಮಂಡ್ಯ ಜನರಿಗೆ ಬಿಟ್ಟಿದ್ದು. ಮಂಡ್ಯ ಸ್ಪರ್ಧೆಯ ಬಗ್ಗೆ ಮಾತುಕತೆ ಫೈನಲ್ ಆಗಿಲ್ಲ. ಮುಂದಿನ ಹಂತಗಳಲ್ಲಿ ಮಾತುಕತೆ ಆಗಬೇಕಿದೆ. ಬೇರೆ ಕ್ಷೇತದ ಬಗ್ಗೆ ನನಗೆ ಆಸಕ್ತಿಯಿಲ್ಲ. ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ರಾಜಕೀಯದಲ್ಲಿ ಏನೇನೋ ಆಗಬೇಕು ಅನ್ನೋ ಆಸೆಯಿಲ್ಲ. ಮಂಡ್ಯ ಜನರ ಋಣ ತೀರಿಸಬೇಕು ಅಷ್ಟೇ ಎಂದರು.

ಅಂಬರೀಶ್ ಸಮಾಧಿಯ ಜೊತೆಗೆ ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ಸಮಾಧಿಗೂ ಪುಷ್ಪ ನಮನ ಸಲ್ಲಿಸಿದ್ದಾರೆ. ಸುಮಲತಾ ಅವರಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಾಥ್ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *