ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ

ರಾಯಚೂರು: 2013ರ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಹಿನ್ನೆಲೆ ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ ಕಾಡುತ್ತಿದೆ.

ರಾಯಚೂರಿನ ಜೆಎಂಎಫ್‍ಸಿ 2ನೇ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರುವ ಪೂಜಾಗಾಂಧಿಗೆ ಸಂಜೆ ಐದು ಗಂಟೆವರೆಗೆ ನ್ಯಾಯಾಲಯದಲ್ಲೇ ಕುಳಿತುಕೊಳ್ಳುವಂತೆ ನ್ಯಾಯಾಧೀಶರು ಶಿಕ್ಷೆ ನೀಡಿದ್ದಾರೆ. ಕುಳಿತುಕೊಳ್ಳದಿದ್ದರೆ ಕೂಡಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಹೇಳಿದ್ದಾರೆ.

ಸಂಜೆ ವೇಳೆಗೆ ಷರತ್ತುಬದ್ಧ ಜಾಮೀನು ಸಿಗಬಹುದು ಇಲ್ಲಾ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆಗಳಿವೆ.

ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನ ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರು. ಈ ಬಗ್ಗೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು.

ಈಗಾಗಲೇ ಒಂದು ಬಾರಿ ಜಾಮೀನನ್ನ ನ್ಯಾಯಾಲಯ ರದ್ದುಗೊಳಿಸಿದೆ. ಈ ಬಾರಿ 50 ಸಾವಿರ ರೂ. ದಂಡ, 2 ಲಕ್ಷ ಶ್ಯೂರಿಟಿಯೊಂದಿಗೆ ಜಾಮೀನು ನೀಡುವ ಸಾಧ್ಯತೆ ಇದೆ.

ಕೋರ್ಟ್ ನಲ್ಲಿರುವ ಪೂಜಾ ಗಾಂಧಿಗೆ ಮಧ್ಯಾಹ್ನದ ಊಟ ಇಲ್ಲದ ಕಾರಣ ಚಾಕ್ಲೇಟ್ ತಿಂದಿದ್ದಾರೆ.

Comments

Leave a Reply

Your email address will not be published. Required fields are marked *