ಸಚಿವ ಡಿಕೆಶಿ, ರಾಮಲಿಂಗಾರೆಡ್ಡಿಯನ್ನು ಭೇಟಿ ಮಾಡಿದ ನಟ ಶಿವರಾಜ್ ಕುಮಾರ್

ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿಯಾಗಿದ್ದಾರೆ.

ನಟ ಶಿವರಾಜ್ ಕುಮಾರ್ ಹಾಗೂ ಸ್ಥಳೀಯ ನಿವಾಸಿಗಳು ಸೇರಿ ವಿಧಾನಸೌಧದಲ್ಲಿ ಸಚಿವರನ್ನು ಭೇಟಿ ಮಾಡಿ ಟ್ರಾಫಿಕ್ ಜಾಮ್ ಕಿರಿಕಿರಿಯ ನಿಯಂತ್ರಣಕ್ಕಾಗಿ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲೇನಿದೆ?: ಮಾನ್ಯತಾ ಟೆಕ್‍ಪಾರ್ಕಗೆ ಹೊಗುವ ವಾಹನಗಳಿಂದ ಟೆಕ್‍ಪಾರ್ಕ್ ಸುತ್ತಮುತ್ತಲಿನ ನಿವಾಸಿಗಳಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಟೆಕ್‍ಪಾರ್ಕ್ ನಿರ್ಮಾಣದ ಸಮಯದಲ್ಲಿ ಟೆಕ್‍ಪಾರ್ಕ್‍ಗೆ ಹೋಗುವ ವಾಹನಗಳಿಗೆ ಇಲ್ಲಿಂದ ರಸ್ತೆ ಕಲ್ಪಿಸಲ್ಲ ಅಂತ ಹೇಳಲಾಗಿತ್ತು. ಆದ್ರೆ ಈಗ ಇದೆ ರಸ್ತೆಯಿಂದ ಮಾನ್ಯತಾ ಟೆಕ್‍ಪಾರ್ಕ್‍ಗೆ ಟೆಕ್‍ಪಾರ್ಕ್ ಸಿಬ್ಬಂದಿ ಹೊಗುತ್ತಿರುವುದರಿಂದ ತೊಂದರೆಯಾಗುತ್ತಿದೆ. 30,000 ಸಿಬ್ಬಂದಿ ಬರುತ್ತಾರೆ ಎಂದು ಅನುಮತಿ ಪಡೆಯಲಾಗಿತ್ತು. ಆದ್ರೆ 1 ಲಕ್ಷ 50 ಸಾವಿರ ಸಿಬ್ಬಂದಿ ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿನಕ್ಕೆ 5000 ಕ್ಕೂ ಹೆಚ್ಚು ವಾಹನಗಳು ಟೆಕ್‍ಪಾರ್ಕ್‍ಗೆ ಬರುತ್ತವೆ. ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ಟ್ರಾಫಿಕ್ ಸಮಸ್ಯೆ ನಿವಾರಣೆ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಜಾಮ್ ವಿರುದ್ಧ ಪ್ರತಿಭಟನೆಗಿಳಿದ ಶಿವರಾಜ್ ಕುಮಾರ್

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಮಾನ್ಯತಾ ಟೆಕ್‍ಪಾರ್ಕ್ ಸುತ್ತಮುತ್ತಲಿನ ನಿವಾಸಿಗಳಿಗೆ ಟ್ರಾಫಿಕ್ ನಿಂದ ತೊಂದರೆಯಾಗುತ್ತಿದೆ. ಹಾಗಾಗಿ ಗೃಹ ಸಚಿವರಿಗೆ ಮನವಿ ಸಲ್ಲಿಸಲು ಬಂದಿದ್ದೆವೆ. 30 ಸಾವಿರ ಸಿಬ್ಬಂದಿ ಬರುತ್ತಾರೆ ಎಂದು ಅನುಮತಿ ಪಡೆಯಲಾಗಿತ್ತು. ಆದ್ರೆ ಈಗ 1 ಲಕ್ಷ 50 ಸಾವಿರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ವಾಹನ ದಟ್ಟಣೆಯಾಗುತ್ತಿದೆ. ರಾಮಲಿಂಗಾರಡ್ಡಿ ಸಹ ಇದರ ಬಗ್ಗೆ ಗಮನ ಹರಿಸುವುದಾಗಿ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.

ಇದೇ ಅಕ್ಟೋಬರ್ 31ರಂದು ಶಿವರಾಜ್ ಕುಮಾರ್ ಮಾನ್ಯತಾ ಟೆಕ್ ಪಾರ್ಕ್ ಆಸೋಸಿಯೇಷನ್ ವತಿಯಿಂದ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಆಕ್ರೋಶವನ್ನು ಹೊರ ಹಾಕಿದ್ದರು.

 

 

Comments

Leave a Reply

Your email address will not be published. Required fields are marked *