ತನಿಖಾಧಿಕಾರಿಯಾಗಲಿದ್ದಾರೆ ರಮೇಶ್ ಅರವಿಂದ್!

ನಟ ರಮೇಶ್ ಅರವಿಂದ್ ಈಗ ಪುರಸೊತ್ತೇ ಸಿಗದಂತೆ ನಾನಾ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶನ, ರಿಯಾಲಿಟಿ ಶೋ ಹೋಸ್ಟಿಂಗ್ ಸೇರಿದಂತೆ ಅವರು ನೆಚ್ಚಿಕೊಂಡಿರೋ ಕೆಲಸಗಳು ಒಂದೆರಡಲ್ಲ. ಆದರೂ ಕೂಡಾ ಕನ್ನಡದ ಪ್ರೇಕ್ಷಕರು ಮಾತ್ರ ಓರ್ವ ನಟರಾಗಿ ರಮೇಶ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಆದರೆ ಈ ವರ್ಷದ ಕಡೆಯ ಹೊತ್ತಿಗೆಲ್ಲ ಪ್ರೇಕ್ಷಕರ ಮನದಿಂಗಿತ ಸಾಕಾರಗೊಳ್ಳೋ ಸೂಚನೆಯೊಂದು ಇದೀಗ ಸಿಕ್ಕಿದೆ. ಎಲ್ಲ ಅಂದುಕೊಂಡಂತೆಯೇ ಆದರೆ ರಮೇಶ್ ಅರವಿಂದ್ ಇನ್ವೆಸ್ಟಿಗೇಟಿವ್ ಆಫೀಸರ್ ಆಗಿ ಚಿತ್ರವೊಂದರಲ್ಲಿ ನಟಿಸಲಿದ್ದಾರೆ!

ನಿರ್ದೇಶಕ ಆಕಾಶ್ ಶ್ರೀವತ್ಸ ರಮೇಶ್ ಅರವಿಂದ್ ಅವರನ್ನೇ ಗಮನದಲ್ಲಿಟ್ಟುಕೊಂಡು ಒಂದು ಕಥೆ ರೆಡಿ ಮಾಡಿಕೊಂಡಿದ್ದಾರಂತೆ. ಈ ಬಗ್ಗೆ ಖುದ್ದು ರಮೇಶ್ ಅವರೊಂದಿಗೂ ಚರ್ಚಿಸಿದ್ದಾರೆ. ರಮೇಶ್ ಕಡೆಯಿಂದಲೂ ಒಪ್ಪಿಗೆ ಸಿಕ್ಕಿದೆ. ಹಾಗಂತ ತಕ್ಷಣದಲ್ಲಿಯೇ ನಟಿಸುವಂತಾ ವಾತಾವರಣ ಈಗಿಲ್ಲ. ಈಗ ರಿಯಾಲಿಟಿ ಶೋ ಮತ್ತು ಚಿತ್ರ ನಿರ್ದೇಶನದಲ್ಲಿ ತೊಡಗಿಕೊಂಡಿರೋದರಿಂದ ಡಿಸೆಂಬರ್ ಹೊತ್ತಿಗೆಲ್ಲ ಈ ಚಿತ್ರ ಟೇಕಾಫ್ ಆಗಲಿದೆಯಂತೆ.

ರಮೇಶ್ ಬಿಡುವಾಗುವವರೆಗೂ ನಿರ್ದೇಶಕ ಆಕಾಶ್ ಸ್ಕ್ರಿಪ್ಟ್ ವರ್ಕ್ ನಡೆಸಲಿದ್ದಾರೆ. ತಾರಾಗಣವೂ ಸೇರಿದಂತೆ ಎಲ್ಲವನ್ನೂ ರೆಡಿ ಮಾಡಿಕೊಂಡು ರಮೇಶ್ ಬಿಡುವಾದಾಕ್ಷಣವೇ ಚಿತ್ರದ ಟೈಟಲ್ ಅನಾವರಣಗೊಳಿಸಿ ಚಿತ್ರೀಕರಣಕ್ಕೆ ತೆರಳಲು ಯೋಜಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *