ಗಾಜನೂರಿನ ಮನೆಯಲ್ಲಿ ರಾಜ್ ಮೊಮ್ಮಗನ ಅರಿಶಿಣ ಶಾಸ್ತ್ರ

ಚಾಮರಾಜನಗರ: ನಟ ರಾಘವೇಂದ್ರ ರಾಜ್‍ಕುಮಾರ್ ಅವರ ಎರಡನೇ ಪುತ್ರ ಯುವರಾಜ್ ಅವರ ಅರಿಶಿಣ ಶಾಸ್ತ್ರ ಗಾಜನೂರಿನ ನಿವಾಸದಲ್ಲಿ ಇಂದು ನಡೆದಿದೆ.

ಮೇ 26ರಂದು ಯುವ ರಾಜ್‍ಕುಮಾರ್ ಅವರ ಮದುವೆ ನಿಗದಿಯಾಗಿದ್ದು, ಇಂದು ಗಾಜನೂರಿನ ಮನೆಯಲ್ಲಿ ಅರಿಶಿಣದ ಶಾಸ್ತ್ರ ನಡೆಯಿತು. ಅರಿಶಿಣದ ಶಾಸ್ತ್ರದಲ್ಲಿ ರಾಜ್‍ಕುಮಾರ್ ಕುಟುಂಬಸ್ಥರು ಭಾಗಿಯಾಗಿದ್ದು, ಮದುವೆ ಸಂಭ್ರಮ ಮನೆ ಮಾಡಿದೆ.

ಯುವರಾಜ್‍ಕುಮಾರ್ ತಮ್ಮ ಗೆಳತಿ ಶ್ರೀದೇವಿ ಜೊತೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನಲ್ಲಿ ಅದ್ಧೂರಿಯಾಗಿ ಮದುವೆ ಆಗಲಿದ್ದಾರೆ. ಈ ಮದುವೆಗೆ ಎಲ್ಲಾ ತಯಾರಿ ನಡೆಯುತ್ತಿದೆ. ಅದೇ ದಿನ ಆರತಕ್ಷತೆ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದಾರೆ. ಈಗಾಗಲೇ ಸಿನಿಮಾರಂಗದ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡುತ್ತಿದ್ದು, ಮದುವೆ ತಯಾರಿಯಲ್ಲಿ ದೊಡ್ಮನೆ ಮಂದಿ ಸಾಕಷ್ಟು ಬ್ಯುಸಿಯಾಗಿದ್ದಾರೆ.

ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವ ರಾಜ್‍ಕುಮಾರ್ ಹಾಗೂ ಶ್ರೀದೇವಿ ಉಂಗುರ ಬದಲಾಯಿಸಿಕೊಂಡಿದ್ದರು. ಖಾಸಗಿ ಹೊಟೇಲ್‍ನಲ್ಲಿ ನಡೆದ ಸಮಾರಂಭದಲ್ಲಿ ಈ ಜೋಡಿ ಎಂಗೇಜ್ ಆಗಿದ್ದರು. ಯುವ ರಾಜ್‍ಕುಮಾರ್ ಹಾಗೂ ಶ್ರೀದೇವಿ ಉಂಗುರ ಬದಲಾವಣೆ ವೇಳೆ ರಾಜ್ ಕುಟುಂಬ ಸದಸ್ಯರು ಹಾಜರಾಗಿದ್ದು, ನವ ಜೋಡಿಗೆ ಶುಭ ಹಾರೈಸಿದ್ದರು.

ಈ ಹಿಂದೆ ಯುವ ಅವರ ಹೆಸರು ಗುರು ರಾಜ್‍ಕುಮಾರ್ ಆಗಿದ್ದು, ಈಗ ಯುವ ರಾಜ್‍ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಯುವ ರಾಜ್‍ಕುಮಾರ್ ಇದುವರೆಗೂ ಯಾವ ಸಿನಿಮಾದಲ್ಲೂ ಹೀರೋ ಆಗಿ ಕಾಣಿಸಿಕೊಂಡಿಲ್ಲ. ಆದರೆ ತಮ್ಮ ಹೋಮ್ ಬ್ಯಾನರ್ ನಲ್ಲಿ ಬರುವ ಚಿತ್ರಗಳ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಸದ್ಯ ಯುವ ಮದುವೆ ಆದ ನಂತರ ಹೀರೋ ಆಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

Comments

Leave a Reply

Your email address will not be published. Required fields are marked *