ಮದ್ವೆ ಮುಂದೂಡಿದ ಸ್ಯಾಂಡಲ್‍ವುಡ್‍ನ ಖ್ಯಾತ ಖಳನಟ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಪ್ರತಿಭಾವಂತ ಖಳನಟ ರಾಜ್ ದೀಪಕ್ ಶೆಟ್ಟಿ ತಮ್ಮ ವಿವಾಹ ಸಮಾರಂಭವನ್ನು ಮುಂದೂಡಿದ್ದಾರೆ.

ರಾಜ್ ದೀಪಕ್ ಶೆಟ್ಟಿ ‘ಪಂಚತಂತ್ರ, ‘ಗಡಿಯಾರ’, ‘ಭರ್ಜರಿ’, ‘ಕೋಟಿಗೊಬ್ಬ 3’, ಸೇರಿದಂತೆ 30ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿರುವ ನಟ ರಾಜ್ ದೀಪಕ್ ಶೆಟ್ಟಿ ಕೊರೊನಾ ಕಾರಣದಿಂದ ತಮ್ಮ ಮದುವೆಯನ್ನು ಮುಂದೂಡಿದ್ದಾರೆ.

ರಾಜ್ ದೀಪಕ್ ಶೆಟ್ಟಿ ದಕ್ಷಿಣ ಭಾರತದ ಹೆಸರಾಂತ ಖಳನಟರಲ್ಲಿ ಒಬ್ಬರು. ಇವರು ಸೋನಿಯಾ ರಾಡ್ರಿಗೋಸ್ ಅವರನ್ನು ಮದುವೆಯಾಗುತ್ತಿದ್ದಾರೆ. ಮೇ 17ಕ್ಕೆ ಮಂಗಳೂರಿನಲ್ಲಿ ವಿವಾಹವಾಗಬೇಕೆಂದು ಪ್ಲಾನ್ ಕೂಡ ಮಾಡಿಕೊಂಡಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ವಿವಾಹ ಸಮಾರಂಭವನ್ನು ಮುಂದೂಡಿದ್ದಾರೆ.

ಸೋನಿಯಾ ರಾಡ್ರಿಗಸ್ ಇವೆಂಟ್ ಆರ್ಗನೈಸರ್ ಆಗಿದ್ದು, ಮಂಗಳೂರು ಫ್ಯಾಷನ್ ವೀಕ್‍ನ ಮಾಲಕಿ ಕೂಡ ಆಗಿದ್ದಾರೆ. ರಾಜ್ ದೀಪಕ್ ಶೆಟ್ಟಿ ಮತ್ತು ಸೋನಿಯಾ ಫೇಸ್ ಬುಕ್‍ನಲ್ಲಿ ಸ್ನೇಹಿತರಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿದ್ದಾರೆ. ಬಳಿಕ ಎರಡು ಮನೆಯವರು ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದರು.

ಸದ್ಯಕ್ಕೆ ಅಕ್ಟೋಬರ್ ತಿಂಗಳಲ್ಲಿ ಮದುವೆ ಕಾರ್ಯಕ್ರಮವನ್ನು ಇಟ್ಟುಕೊಳ್ಳುವ ಯೋಚನೆ ಮಾಡಿದ್ದಾರೆ. ಅಕ್ಟೋಬರ್ 18 ರಂದು ದೀಪಕ್ ಶೆಟ್ಟಿ ಹುಟ್ಟುಹಬ್ಬ. ಹೀಗಾಗಿ ಅಂದಿನ ದಿನ ಮದುವೆಯಾಗಲಿದ್ದಾರೆ. ಸದ್ಯಕ್ಕೆ ಲಾಕ್‍ಡೌನ್‍ನಿಂದಾಗಿ ಸಿನಿಮಾ ಚಿತ್ರೀಕರಣ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ದೀಪಕ್ ರಾಜ್ ಮಂಗಳೂರಿನ ಸ್ವಗೃಹದಲ್ಲಿ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ದೀಪಕ್ ಶೆಟ್ಟಿ, “ಮಂಗಳೂರಿನಲ್ಲಿ ಇವೆಂಟ್ ಆರ್ಗನೈಸರ್ ಆಗಿರುವ ಸೋನಿಯಾ ರಾಡ್ರಿಗಸ್ ಮತ್ತು ನಾನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದೆವು. ಮೇ 10ರಂದು ನಿಶ್ಚಿತಾರ್ಥ ಮಾಡಿಕೊಂಡು, 17ಕ್ಕೆ ಮಂಗಳೂರಿನಲ್ಲಿ ಮದುವೆಯಾಗಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದೆ. ಆದರೆ ಕೊರೊನಾ ಕಾರಣದಿಂದ ಎಲ್ಲವೂ ಕ್ಯಾನ್ಸಲ್ ಆಗಿದೆ. ಅಕ್ಟೋಬರ್ ತಿಂಗಳಿನಲ್ಲಿ ನನ್ನ ಹುಟ್ಟುಹಬ್ಬವಿದೆ. ಅಂದು ಮದುವೆ ಆಗಲಿದ್ದೇನೆ” ಎಂದಿದ್ದಾರೆ.

‘ಕೋಟಿಗೊಬ್ಬ-3’ ಸೇರಿದಂತೆ ದೀಪಕ್ ನಟನೆಯ ಕೆಲ ಸಿನಿಮಾಗಳೂ ರಿಲೀಸ್ ಆಗಬೇಕಿದೆ. ಈಗ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾ ಆಯ್ಕೆ ಆಗಿದ್ದಾರೆ.

Comments

Leave a Reply

Your email address will not be published. Required fields are marked *