ಪ್ರಿಯಾಂಕ ಗಾಂಧಿ ಪರ ಬ್ಯಾಟ್ ಬೀಸಿ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟ ಪ್ರಕಾಶ್ ರೈ

ಚಿತ್ರದುರ್ಗ: ಹೆಣ್ಣು ಮಗಳು ರಾಜಕೀಯಕ್ಕೆ ಬಂದಿರುವುದು ಒಳ್ಳೆಯ ಬೆಳವಣಿಗೆ. ಆದರೆ ಗಾಂಧಿ ಕುಟುಂಬಕ್ಕೆ ಸೇರಿದ್ದಾರೆ ಅಂತ ಹೇಳುವುದು ಸರಿಯಲ್ಲ. ಪ್ರಿಯಾಂಕಾ ಅವರು ಗಾಂಧಿ ಕುಟುಂಬದಲ್ಲಿ ಹುಟ್ಟಿದ್ದೇ ತಪ್ಪಾ ಎಂದು ಬಹುಭಾಷಾ ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.

ಇಲ್ಲಿನ ಬೋವಿ ಗುರುಪೀಠದ ಸಿದ್ಧರಾಮೇಶ್ವರ ಶ್ರೀಗಳನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ಅವರು ರಾಜಕೀಯಕ್ಕೆ ಕಾಲಿಟ್ಟಿರುವುದನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಹೊರತಾದ ರಾಷ್ಟ್ರೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ಅದು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಟ್ಟರು.

ಪ್ರತಿ ಮಾತಿಗೂ ಪ್ರಧಾನಿ ನರೇಂದ್ರ ಮೋದಿ, ಮೋದಿ ಎನ್ನುತ್ತಾರೆ. ಮೋದಿ ಅವರಿಗೆ ಕುಟುಂಬವಿಲ್ಲ. ಆದರೆ ಅವರ ಪಕ್ಷದಲ್ಲಿ ಯಾರೂ ಕುಟುಂಬ ರಾಜಕೀಯ ಮಾಡಿಲ್ಲವೇ? ಗಾಂಧಿ ಕುಟುಂಬ ಕಂಡರೆ ಮಾತ್ರ ಯಾಕೆ ಕುಟುಕುತ್ತೀರಿ ಎಂದು ಪ್ರಶ್ನಿದರು.

ಪ್ರಧಾನಿ ಮೋದಿ ಅವರು ಮೇಲ್ಜಾತಿಗೆ ಶೇ. 10 ಮೀಸಲಾತಿ ನೀಡುವ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿದ ಪ್ರಕಾಶ್ ರೈ ಅವರು, ಶೋಷಿತ ಸಮುದಾಯಕ್ಕೆ ಶೇ. 10 ಮೀಸಲಾತಿ ಬದಲಾಗಿ ಬಡವರಿಗೆ ಕೆಲಸ ಕೊಡಬೇಕು ಎಂದ ಅವರು, ನಾನು ಹೇಳುತ್ತಿದ್ದೇನೆ ಮುಂದಿನ ದಿನಗಳಲ್ಲಿ ಮೋದಿ ಅವರು ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು.

ಕೇವಲ ನಟರಾದರೆ ರಾಜಕೀದಲ್ಲಿ ಪಳಗುವುದಿಲ್ಲ. ಬಡವರು, ಶೋಷಿತ ವರ್ಗದವರ ಅಳಲು ಕೇಳಬೇಕು. ಆಗ ಮಾತ್ರ ನಿಜವಾದ ರಾಜಕಾರಣಿ ಆಗಬಹುದು ಅಂತ ಚಿತ್ರರಂಗದಿಂದ ರಾಜಕೀಯ ಪ್ರವೇಶ ಮಾಡಿ ಕೈ ಸುಟ್ಕೊಂಡವರಿಗೂ ಛಾಟಿ ಬೀಸಿದ ಅವರು, ರಾಷ್ಟ್ರೀಯ ಪಕ್ಷಗಳಲ್ಲಿ ಅವರ ಹೈಕಮಾಂಡ್ ಹೇಳಿದಂತೆ ನಡೆಯುತ್ತದೆ. ಅವರವರ ಬೇಳೆಯನ್ನು ಬೇಯಿಸಿಕೊಳ್ಳುವಲ್ಲಿ ಎಲ್ಲಾ ಪಕ್ಷಗಳು ನಿರತವಾಗಿದೆ. ಆದ್ದರಿಂದ ಬಡವರ ಪರ ಧ್ವನಿ ಎತ್ತಲು ನಾನು ರಾಜಕೀಯ ಪ್ರವೇಶ ಮಾಡಿದ್ದೇನೆ. ಈ ಬಾರಿಯ ಚುನಾವಣೆಗೆ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *