ಕನ್ನಡ ನಟನ ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಗಳು ಅಂದರ್

ಬೆಂಗಳೂರು: ಕನ್ನಡ ನಟರೊಬ್ಬರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಶೇಷಾದ್ರಿಪುರಂನ ನಿತೇಶ್, ನಿತ್ಯಾನಂದ, ವಿಜಯನಗರದ ಮಧು ಹಾಗೂ ಪಿಜಿಹಳ್ಳಿಯ ಪೃಥ್ವಿ ಬಂಧಿತ ಆರೋಪಿಗಳು. ಸಿಸಿಬಿ ಪೊಲೀಸರು ಶೇಷಾದ್ರಿಪುರಂ ಠಾಣೆಯ ಬಿಡಿಎ ಕಚೇರಿ ಬಳಿ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್ ಸ್ಟಾರ್ ನಟನ ಹತ್ಯೆಗೆ ನಡೆದಿತ್ತು ಪ್ಲಾನ್..!

ಕಳೆದ ಗುರುವಾರ ಅಂದರೆ ಮಾರ್ಚ್ 7 ರಂದು ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದರು. ಬಂಧಿತ ನಾಲ್ವರ ಬಳಿಯೂ ಲಾಂಗು ಮತ್ತು ಡ್ರಾಗರ್ ಸೇರಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಸಿಸಿಬಿ ದಾಳಿ ವೇಳೆ ಐದು ಮಂದಿ ಸ್ಥಳದಲ್ಲಿದ್ದು, ಓರ್ವ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳೆಲ್ಲ ಸ್ಲಂ ಭರತನ ಸಹಚರರು ಎಂದು ಗುರುತಿಸಲಾಗಿದೆ.

ಸ್ಲಂ ಭರತ ಪಡೆದಿದ್ದ ಸುಪಾರಿಯನ್ನ ತೀರಿಸಲು ಈ ನಾಲ್ವರು ಆರೋಪಿಗಳು ಮುಂದಾಗಿದ್ದರು. ಸಿಸಿಬಿ ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ನಟನೊಬ್ಬನನ್ನ ಹತ್ಯೆ ಮಾಡಲು ಸಿದ್ಧತೆ ನಡೆಸಿ ಬಂದಿದ್ದಾಗಿ ಸಿಸಿಬಿ ಅಧಿಕಾರಿಗಳ ಮುಂದೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಆದರೆ ಪೊಲೀಸರು ಸದ್ಯಕ್ಕೆ ಮಾತ್ರ ಸ್ಟಾರ್ ನಟ ಯಾರು ಎಂಬುದನ್ನು ರಿವೀಲ್ ಮಾಡಿಲ್ಲ.

ಭರತ ಯಾರು?
ಸ್ಲಂ ಭರತ ರಾಜಗೋಪಾಲನಗರ ಠಾಣೆ ರೌಡಿಶೀಟರ್ ಆಗಿದ್ದು, ಕೊಲೆ ಮತ್ತು ಕೊಲೆಯತ್ನ ಸೇರಿ ಸುಮಾರು 30ಕ್ಕೂ ಹೆಚ್ಚು ಕೇಸ್ ಭರತನ ಮೇಲೆ ದಾಖಲಾಗಿದೆ. ಎಡರು ದಿನಗಳ ಹಿಂದೆಯಷ್ಟೆ ಕೊಲೆಯಾಗಿ ರೌಡಿ ಲಕ್ಷ್ಮಣನ ಶಿಷ್ಯನೇ ಈ ಸ್ಲಂ ಭರತ ಎಂದು ತಿಳಿದು ಬಂದಿದೆ. ಕನ್ನಡದ ನಟರೊಬ್ಬರ ಹತ್ಯೆಗೆ ಸುಪಾರಿ ಪಡೆದಿದ್ದಾಗಿ ಸ್ಲಂ ಭರತ ಹೇಳಿಕೊಂಡಿದ್ದನು.

ಈ ವಿಚಾರವನ್ನ ಬಾರ್ ವೊಂದರಲ್ಲಿ ತನ್ನ ಸಹಚರರ ಜೊತೆ ಚರ್ಚಿಸಿದ್ದು, ಕನ್ನಡದ ನಟನ ಹತ್ಯೆಗೆ ಸ್ಲಂ ಭರತ ಸಿದ್ಧತೆ ನಡೆಸಿರುವುದು ಪೊಲೀಸರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸ್ಲಂ ಭರತನ ಕಾಲಿಗೆ ಗುಂಡು ಹಾರಿಸಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿ ಸ್ಲಂ ಭರತ ಇದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *