ಅಂದು ತನಗೆ ದಾರಿ ತೋರಿಸಿದ ನಿರ್ದೇಶಕರ ಪುತ್ರನಿಗೆ ದಚ್ಚು ಸಾಥ್!

ಬೆಂಗಳೂರು: ಬೆಳೆಯೋವರೆಗೂ ಅಷ್ಟೇ, ಬೆಳೆದು ನಿಂತ್ಮೇಲೆ ನೀನ್ ಯಾರೋ ನನಗೆ ಗೊತ್ತಿಲ್ಲ ಅನ್ನೋರೆ ಹೆಚ್ಚು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮಗೆ ಸಹಾಯ ಮಾಡಿದ ವ್ಯಕ್ತಿಯನ್ನು ಮರೆಯದೆ ಇಂದಿಗೂ ಅವರ ಸಹಾಯವನ್ನು ಸ್ಮರಿಸುತ್ತಾರೆ.

20 ವರ್ಷಗಳ ಹಿಂದೆ ದರ್ಶನ್ ಗೆ ನಿರ್ದೇಶಕರೊಬ್ಬರು ಸಹಾಯ ಮಾಡಿದ್ದರು. ಆ ಸಹಾಯವನ್ನು ದರ್ಶನ್ ಇದೂವರೆಗೂ ಮರೆತಿಲ್ಲ. ಸಿನಿಮಾರಂಗಕ್ಕೆ ಬರುವ ಮೊದಲು ತೂಗುದೀಪ್ ಶ್ರೀನಿವಾಸ್ ಕನ್ನಡದ ಖ್ಯಾತ ಖಳನಟನ ಪುತ್ರ ಎನ್ನುವ ಕ್ರೆಡಿಟ್ ಇತ್ತು. ಆದರೆ ಅದನ್ನು ನೋಡಿ ಯಾರೊಬ್ಬರು ಅವರಿಗೆ ಅವಕಾಶ ಕೊಟ್ಟಿಲ್ಲ. ನಟನ ಮಗನಾಗಿದ್ದರೂ ಲೈಟ್ ಮ್ಯಾನ್, ಕ್ಯಾಮೆರಾ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.

ಈ ವೇಳೆ ನಿರ್ದೇಶಕ ಎಸ್. ನಾರಾಯಣ್ ತಮ್ಮ ಅಂಬಿಕಾ ಸೀರಿಯಲ್ ಮೂಲಕ ದರ್ಶನ್ ಅವರನ್ನ ಕಿರುತೆರೆಗೆ ಪರಿಚಯಿಸಿದ್ದರು. ಅಂಬಿಕಾ ಆದಮೇಲೆ ಶ್ರೀಮತಿ, ವೈಷ್ಣವಿ ಸೀರಿಯಲ್ ಗಳಲ್ಲಿಯೂ ದರ್ಶನ್ ಮಿಂಚಿದ್ದಾರೆ. ಸೀರಿಯಲ್‍ ನಲ್ಲಿ ದರ್ಶನ್ ಅಭಿನಯಕ್ಕೆ ಜನರಿಂದ ಪ್ರಶಂಸೆ ಸಿಗುತ್ತದೆ. ಇದನ್ನ ನೋಡಿದ ಎಸ್.ನಾರಾಯಣ್ ಅವರು `ಮಹಾಭಾರತ’ ಸಿನಿಮಾದಲ್ಲಿ ದರ್ಶನ್ ಗೆ ಖಳನಾಯಕನ ಪಾತ್ರವನ್ನ ಕೊಡುತ್ತಾರೆ. ನಂತರ ದೇವರ ಮಗ, ಭೂತಯ್ಯನ ಮಕ್ಕಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡುತ್ತಾರೆ. ಬಳಿಕ ಸಿನಿಮಾರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ.

ಅಂಬಿಕಾ ಹಾಗೂ ಮಹಾಭಾರತ ದರ್ಶನ್ ಲೈಫ್ ನಲ್ಲಿ ಮೊದಲ ಹೆಜ್ಜೆ. ಅಂದು ಎಸ್. ನಾರಾಯಣ್ ಮಾಡಿದ್ದ ಸಹಾಯಕ್ಕೆ ಬೇರೊಂದು ರೂಪದಲ್ಲಿ ಸಹಾಯ ಮಾಡಿದ್ದಾರೆ. ಹೊಸಬರ ಹೊಸಪ್ರಯತ್ನಕ್ಕೆ ಸದಾ ಕೈಜೋಡಿಸುವ ದರ್ಶನ್, ಎಸ್.ನಾರಾಯಣ್ ಪುತ್ರ ಪಂಕಜ್ ರ ಹೊಸ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಪಂಕಜ್ ಒಡೆತನದ ಬ್ಯೂಟಿ ಸೆಲೂನ್ ಉದ್ಘಾಟನೆಗೆ ಅತಿಥಿಯಾಗಿ ಆಗಮಿಸಿ ಪಂಕಜ್ ಬೆನ್ನುತಟ್ಟಿದ್ದಾರೆ. ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ಫ್ರೀ ಮಾಡ್ಕೊಂಡು ಸಲೂನ್ ಉದ್ಘಾಟನೆ ಮಾಡಿದ್ದಾರೆ.

ಅಂಬಿಕಾ ಸೀರಿಯಲ್ ಟೈಮ್‍ನಲ್ಲಿದ್ದ ದರ್ಶನ್ ಗೂ ಇವತ್ತಿನ ದರ್ಶನ್‍ಗೂ ಯಾವುದೇ ವ್ಯತ್ಯಾಸವಿಲ್ಲ. ಸ್ಟಾರ್ ನಟನಾಗಿ ಬೆಳೆದರೂ ಕಿಂಚಿತ್ತೂ ಅಹಂ ಇಲ್ಲ. ಸಾಧನೆಯ ಕಡೆ ಸಾಗ್ತಿರುವ ದರ್ಶನ್ ರನ್ನ ನೋಡಿ ತುಂಬಾ ಖುಷಿಯಾಗುತ್ತೆ. ಈ ಸರಳತೆ, ಕೆಲಸದ ಮೇಲಿರುವ ಭಕ್ತಿ ಅವರನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿ. ದೇಶ ತಿರುಗಿ ನೋಡುವಂತಹ ಎತ್ತರದ ಸ್ಥಾನಕ್ಕೆ ಸಾರಥಿ ಏರಲಿ ಎಂದು ಎಸ್. ನಾರಾಯಣ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *