ದರ್ಶನ್ ಸಮಾಜ ಸೇವೆಗೆ ಕೈ ಜೋಡಿಸಿದ ಚಿಕ್ಕಣ್ಣ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿ ಹಾಗೂ ಪರಿಸರದ ಮೇಲೆ ಇರುವ ಪ್ರೀತಿಯಿಂದ ಅರಣ್ಯ ಇಲಾಖೆ ನೆರವಿಗೆ ಮುಂದಾಗಿರುವುದು ಎಲ್ಲರಿಗೂ ತಿಳಿದಿದೆ. ಸದ್ಯ ದರ್ಶನ್ ಅವರ ಈ ಕಾರ್ಯಕ್ಕೆ ಹಾಸ್ಯ ನಟ ಚಿಕ್ಕಣ್ಣ ಅವರು ಕೂಡ ಕೈ ಜೋಡಿಸಿದ್ದಾರೆ.

ಹೌದು, ದರ್ಶನ್ ಅವರು ತಮ್ಮ ಸಫಾರಿಯ ವೇಳೆ ಸೆರೆ ಹಿಡಿದಿದ್ದ ಫೋಟೋವನ್ನು ನಟ ಚಿಕ್ಕಣ್ಣ 1 ಲಕ್ಷ ರೂ. ನೀಡಿ ಖರೀದಿ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿ ಟ್ವೀಟ್ ಮಾಡಿರುವ ದರ್ಶನ್, ‘ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ 1 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಘ್ನತೆಗಳು’ ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಬ್ಯುಸಿಯ ನಡುವೆಯು ತಮ್ಮ ವಿರಾಮ ವೇಳೆಯನ್ನ ಸದುಪಯೋಗ ಪಡಿಸಿಕೊಳ್ಳುವ ದರ್ಶನ್ ಬಿಡುವಿದ್ದಾಗೆಲ್ಲಾ ಕಾಡಿನಲ್ಲಿ ಕಾಲ ಕಳೆಯುತ್ತಾರೆ. ಅಲ್ಲದೇ ವನ್ಯಜೀವಿ ಹಾಗೂ ಪ್ರಕೃತಿ ಫೋಟೋಗ್ರಾಫಿ ಬಗ್ಗೆ ದರ್ಶನ್ ಹೆಚ್ಚು ಆಸಕ್ತರಾಗಿದ್ದು, ಪ್ರಾಣಿ ಪಕ್ಷಿಗಳ ಅಂದವನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಹವ್ಯಾಸ ಹೊಂದಿದ್ದಾರೆ. ಈ ಹಿಂದೆ ತಾವು ಸೆರೆ ಹಿಡಿದ್ದ ಪ್ರಕೃತಿಯ ಅದ್ಭುತ ದೃಶ್ಯಗಳ ಫೋಟೋಗಳನ್ನು ಹರಾಜು ಹಾಕಿದ್ದರು. ಮಾರ್ಚ್ 3 ರಂದು ನಡೆದ ಈ ಹರಾಜಿನಲ್ಲಿ 3.75 ಲಕ್ಷ ರೂ. ಸಂಗ್ರಹಣೆಯಾಗಿತ್ತು. ಇದರಲ್ಲಿ ಬಂದ ಹಣವನ್ನು ದರ್ಶನ್ ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇನೆ ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *