ಡಿ.ಸಿ.ತಮ್ಮಣ್ಣ ವಿವಾದಾತ್ಮಕ ಹೇಳಿಕೆ-ಬೆಂಬಲಿಗರಿಂದ ಸ್ಪಷ್ಟನೆ

ಮಂಡ್ಯ: ಮತದಾರರ ಮೇಲೆ ಅಶ್ಲೀಲ ಪದ ಬಳಕೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಸಚಿವ ತಮ್ಮಣ್ಣ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರ ಬೆಂಬಲಿಗರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮಣ್ಣರ ಹೇಳಿಕೆಗೆ ಸ್ಪಷ್ಟನೆ ನೀಡಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮದ್ದೂರು ತಾಲೂಕಿನ ಜೆಡಿಎಸ್ ಕಾರ್ಯಾಧ್ಯಕ್ಷ ದಾಸೇಗೌಡ, ನಾವು ಪ್ರತಿದಿನ ಸಚಿವರಿಗೆ ನಮಗೆ ಅದು ಬೇಕು, ಇದು ಬೇಕೆಂದು ಕೇಳುತ್ತೇವೆ. ಈ ರೀತಿ ಕೇಳುವ ನಮಗೆ ಚುನಾವಣೆ ಸಂದರ್ಭದಲ್ಲಿ ಎಲ್ಲಿ ಹೋಗಿದ್ರಿ ಎಂದು ಆಪ್ತರಿಗೆ ಸಚಿವರು ತರಾಟೆಗೆ ತೆಗೆದುಕೊಂಡರೆ ಹೊರತರೆ ಮತದಾರರನ್ನು ಉದ್ದೇಶಿಸಿ ಮಾತನಾಡಿಲ್ಲ. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಕೆಲವು ಶಾಸಕರು ತಮಗೆ ಸಿಗುವ ಅನುದಾನದಲ್ಲಿ ಕೆಲಸ ಮಾಡುತ್ತಾರೆ. ಆದ್ರೆ ಸಚಿವ ತಮ್ಮಣ್ಣವರು ಯಾವ ಇಲಾಖೆಯಲ್ಲಿ ಏನೇನೂ ಅನುದಾನ ಸಿಗುತ್ತದೆಯೋ ಎಂದು ಹುಡುಕಿ ಕ್ಷೇತ್ರಕ್ಕೆ ತಂದಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದ ಎಲ್ಲ ಕೆಲಸವನ್ನು ಓರ್ವ ಶಾಸಕ ಮಾಡಲು ಸಾಧ್ಯವಿಲ್ಲ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಹ ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಗುಂಪು ಯೋಜನೆಯಲ್ಲಿ ಕಟ್ಟಿಕೊಂಡ ಮನೆಗಳು ಸೋರುತ್ತಿದ್ದವು. ಮನೆಗಳ ರಿಪೇರಿಗೆ ಶಾಸಕರ ಅನುದಾನ ಸಿಗಲ್ಲ ಎಂದು ತಿಳಿದು ವೈಯಕ್ತಿಕವಾಗಿ 2 ಲಕ್ಷ ರೂ. ನೀಡಿ ದುರಸ್ತಿ ಮಾಡಿದ್ದಾರೆ. ಅಂದು ನಡೆದ ಸಭೆಯಲ್ಲಿ ಕಾರ್ಯಕರ್ತರು ಮತ್ತು ಆಪ್ತರು ಭಾಗಿಯಾಗಿದ್ದರು. ಹಾಗಾಗಿ ನಮ್ಮೆಲ್ಲರಿಗೂ ಕ್ಲಾಸ್ ತೆಗೆದುಕೊಂಡರು. ಸಚಿವರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದರು.

Comments

Leave a Reply

Your email address will not be published. Required fields are marked *