ಗೋಮಾಂಸ ಮಾರುತ್ತಿದ್ದ ಮುಸ್ಲಿಂ ವ್ಯಾಪಾರಿಗೆ ಥಳಿಸಿ, ಹಂದಿ ಮಾಂಸ ತಿನ್ನುವಂತೆ ಒತ್ತಾಯಿಸಿದ ದುಷ್ಕರ್ಮಿಗಳು!

ಬಿಸ್‍ಪುರ: ಗೋಮಾಂಸ ಮಾರಾಟ ಮಾಡಿದ್ದಕ್ಕೆ ಮುಸ್ಲಿಂ ವ್ಯಾಪಾರಿಯೊಬ್ಬರನ್ನು ದುಷ್ಕರ್ಮಿಗಳು ಥಳಿಸಿ, ಹಂದಿ ಮಾಂಸ ತಿನ್ನುವಂತೆ ಹಿಂಸೆ ನೀಡಿರುವ ಅಮಾನವೀಯ ಘಟನೆ ಅಸ್ಸಾಂನ ಬಿಸ್ವಾನಾಥ್ ಜಿಲ್ಲೆಯಲ್ಲಿ ನಡೆದಿದೆ.

ವ್ಯಾಪಾರಿ ಶೌಕತ್ ಆಲಿ(68) ಹಲ್ಲೆಗೊಳಗಾದ ವ್ಯಾಪಾರಿ. ಗೊಮಾಂಸ ಮಾರುತ್ತಿದ್ದಕ್ಕೆ ದುಷ್ಕರ್ಮಿಗಳ ಗುಂಪೊಂದು ವ್ಯಾಪಾರಿ ಮೇಲೆ ಭಾನುವಾರದಂದು ಹಲ್ಲೆ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಡುರಸ್ತೆಯಲ್ಲಿಯೇ ಮೊಣಕಾಲಿನಲ್ಲಿ ಕೂರಿಸಿ ವ್ಯಾಪಾರಿಗೆ ದುಷ್ಕರ್ಮಿಗಳು ಥಳಿಸಿದ್ದಾರೆ. ಅಲ್ಲದೆ ಶಿಕ್ಷೆ ರೂಪದಲ್ಲಿ ಹಂದಿ ಮಾಂಸ ತಿನ್ನುವಂತೆ ತಾಕೀತು ಮಾಡಿದ್ದಾರೆ. ಈ ವೇಳೆ ಆತ ಬೇಡಿಕೊಂಡರೂ ಬಿಡದೇ ಮನಸೋಯಿಚ್ಚೆ ಥಳಿಸಿದ್ದಾರೆ. ಅಲ್ಲದೆ ಈ ದೃಶ್ಯವನ್ನು ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ.

ಸದ್ಯ ಹಲ್ಲೆಗೊಳಗಾದ ಶೌಕತ್ ಆಲಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೌಕತ್ ಆಲಿ ಹಾಗೂ ಅವರ ಸಹೋದರ ಇಬ್ಬರೂ ನೀಡಿದ ದೂರಿನ ಆಧಾರದ ಮೇಲೆ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು ವಿಡಿಯೋವನ್ನು ಇಟ್ಟುಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಮೂಲತಃ ಶೌಕತ್ ಅಲಿ ಬಾಂಗ್ಲಾದೇಶದವರು. ಬಿಸ್ವಾನಾಥ್‍ನಲ್ಲಿ ಲೈಸನ್ಸ್ ಪಡೆದುಕೊಂಡೆ ಗೋಮಾಂಸ ಮಾರಾಟ ಮಾಡುತ್ತಿದ್ದರು. ಆದ್ರೆ ಸುಳ್ಳು ಆರೋಪ ಮಾಡಿ ದುಷ್ಕರ್ಮಿಗಳು ವ್ಯಾಪಾರಿ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನೀನು ಬಾಂಗ್ಲಾದೇಶದವನು ಅಲ್ವಾ? ನಿನ್ನ ಎನ್‍ಆರ್ ಸಿ(ನಾಗರಿಕರ ರಾಷ್ಟ್ರೀಯ ನೊಂದಣಿ)ಯಲ್ಲಿ ಏನು ಹೆಸರಿದೆ ಎಂದು ದುಷ್ಕರ್ಮಿಗಳು ಪ್ರಶ್ನೆ ಮಾಡಿ ಗದರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *