ಶಿಕ್ಷಣ ಕೇಸರಿಕರಣಗೊಳಿಸೋದ್ರಲ್ಲಿ ತಪ್ಪೇನಿದೆ: ವೆಂಕಯ್ಯ ನಾಯ್ಡು ಪ್ರಶ್ನೆ

ಡೆಹ್ರಾಡೂನ್: ಶಿಕ್ಷಣವನ್ನು ಕೇಸರಿಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸುತ್ತಾರೆ. ಶಿಕ್ಷಣ ಕೇಸರೀಕರಣಗೊಳಿಸುವುದರಲ್ಲಿ ತಪ್ಪೇನಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶ್ನಿಸಿದ್ದಾರೆ.

ದೇಶದ ಜನರು ತಮ್ಮ ?ವಸಾಹತುಶಾಹಿ ಮನಸ್ಥಿತಿ’ಯನ್ನು ಬಿಟ್ಟು ತಮ್ಮ ಸ್ವಂತ ಅಸ್ಮಿತೆ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಯಬೇಕಿದೆ. ದೇಶದಲ್ಲಿ ವಿದೇಶಿ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಿ ಶಿಕ್ಷಣವನ್ನು ಗಣ್ಯರಿಗೆ ಸೀಮಿತಗೊಳಿಸಿದರು. ಹೀಗಾಗಿ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಕರೆ ನೀಡಿದ್ದಾರೆ.

ಶತಮಾನಗಳ ವಸಾಹತುಶಾಹಿ ಆಳ್ವಿಕೆಯು ನಮ್ಮನ್ನು ಕೀಳು ಜನಾಂಗವಾಗಿ ನೋಡುವುದನ್ನು ಕಲಿಸಿತು. ನಮ್ಮದೇ ಸಂಸ್ಕøತಿ, ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಧಿಕ್ಕರಿಸಲು ನಮಗೆ ಕಲಿಸಲಾಯಿತು. ಇದು ನಮ್ಮ ರಾಷ್ಟ್ರ ಬೆಳವಣಿಗೆಯನ್ನು ನಿಧಾನಗೊಳಿಸಿತು. ವಿದೇಶಿ ಭಾಷೆಯ ಹೇರಿಕೆಯು ಶಿಕ್ಷಣವನ್ನು ಸಮಾಜದ ಒಂದು ಸಣ್ಣ ವರ್ಗಕ್ಕೆ ಸೀಮಿತಗೊಳಿಸಿತು. ಹೆಚ್ಚಿನ ಜನಸಂಖ್ಯೆಯ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಆಮದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ

ನಾವು ನಮ್ಮ ಪರಂಪರೆ, ಸಂಸ್ಕೃತಿ, ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಪಡಬೇಕು. ನಾವು ನಮ್ಮ ಬೇರುಗಳಿಗೆ ಹಿಂತಿರುಗಬೇಕು. ನಾವು ನಮ್ಮ ವಸಾಹತುಶಾಹಿ ಮನಸ್ಥಿತಿಯನ್ನು ಧಿಕ್ಕರಿಸಬೇಕು. ನಮ್ಮ ಮಕ್ಕಳಿಗೆ ಭಾರತೀಯ ಅಸ್ಮಿತೆ ಬಗ್ಗೆ ಹೆಮ್ಮೆ ಪಡುವಂತೆ ಮಾಡಬೇಕು. ನಾವು ಸಾಧ್ಯವಾದಷ್ಟು ಭಾರತೀಯ ಭಾಷೆಗಳನ್ನು ಕಲಿಯಬೇಕು. ನಾವು ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು. ಜ್ಞಾನದ ನಿಧಿಯಾಗಿರುವ ನಮ್ಮ ಗ್ರಂಥಗಳನ್ನು ತಿಳಿದುಕೊಳ್ಳಲು ಸಂಸ್ಕೃತವನ್ನು ಕಲಿಯಬೇಕು ಎಂದು ತಿಳಿಸಿದ್ದಾರೆ.

ಎಲ್ಲಾ ಗ್ಯಾಜೆಟ್ ಅಧಿಸೂಚನೆಗಳನ್ನು ಆಯಾ ರಾಜ್ಯದ ಮಾತೃಭಾಷೆಯಲ್ಲಿ ಹೊರಡಿಸುವ ದಿನಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ. ನಿಮ್ಮ ಮಾತೃಭಾಷೆ ನಿಮ್ಮ ದೃಷ್ಟಿಯಂತಿದೆ. ಆದರೆ ವಿದೇಶಿ ಭಾಷೆಯ ನಿಮ್ಮ ಜ್ಞಾನವು ಕನ್ನಡಕವಿದ್ದಂತೆ. ಶಿಕ್ಷಣ ವ್ಯವಸ್ಥೆಯ ಭಾರತೀಕರಣವು ಭಾರತದ ಹೊಸ ಶಿಕ್ಷಣ ನೀತಿಯ ಕೇಂದ್ರವಾಗಿದೆ. ಇದು ಮಾತೃಭಾಷೆಗಳ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದಿದ್ದಾರೆ.

ನಾವು ಶಿಕ್ಷಣವನ್ನು ಕೇಸರಿಕರಣಗೊಳಿಸುತ್ತೇವೆ ಎಂದು ಆರೋಪಿಸುತ್ತಾರೆ. ಆದರೆ ಕೇಸರಿಕರಣದಲ್ಲಿ ತಪ್ಪೇನಿದೆ? ಸರ್ವೇ ಭವಂತು ಸುಖಿನಃ (ಎಲ್ಲರೂ ಸಂತೋಷವಾಗಿರಲಿ) ಮತ್ತು ವಸುಧೈವ ಕುಟುಂಬಕಂ (ಜಗತ್ತೇ ಒಂದು ಕುಟುಂಬ) ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಅಡಕವಾಗಿರುವ ತತ್ವಶಾಸ್ತ್ರಗಳು ಇಂದಿಗೂ ಭಾರತದ ವಿದೇಶಾಂಗ ನೀತಿಯ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

ಮೂಲ ಬೇರಿನ ಬಾಂಧವ್ಯ ಹೊಂದಿರುವ ಬಹುತೇಕ ಎಲ್ಲಾ ದಕ್ಷಿಣ ಏಷ್ಯಾದ ದೇಶಗಳೊಂದಿಗೆ ಭಾರತ ಉತ್ತಮ ಸಂಬಂಧವನ್ನು ಹೊಂದಿದೆ. ಸಿಂಧೂ ಕಣಿವೆಯ ನಾಗರಿಕತೆಯು ಅಫ್ಘಾನಿಸ್ತಾನದಿಂದ ಗಂಗಾ ಬಯಲಿನವರೆಗೆ ವಿಸ್ತರಿಸಿತು. ಯಾವುದೇ ದೇಶದ ಮೇಲೆ ಮೊದಲು ದಾಳಿ ಮಾಡದ ನಮ್ಮ ನೀತಿಯನ್ನು ಪ್ರಪಂಚದಾದ್ಯಂತ ಗೌರವಿಸಲಾಗುತ್ತದೆ. ಇದು ಹಿಂಸಾಚಾರಕ್ಕಿಂತ ಅಹಿಂಸೆ ಮತ್ತು ಶಾಂತಿಯನ್ನು ಆರಿಸಿದ ಯೋಧ ರಾಜ ಅಶೋಕನ ದೇಶ ಎಂದು ಬಣ್ಣಿಸಿದ್ದಾರೆ.

ಪ್ರಾಚೀನ ಭಾರತೀಯ ವಿಶ್ವವಿದ್ಯಾನಿಲಯಗಳಾದ ನಳಂದಾ ಮತ್ತು ತಕ್ಷಶಿಲಾದಲ್ಲಿ ಅಧ್ಯಯನ ಮಾಡಲು ವಿಶ್ವದ ಎಲ್ಲೆಡೆಯಿಂದ ಜನರು ಬರುತ್ತಿದ್ದ ಕಾಲವೊಂದಿತ್ತು. ಆದರೆ ಅದರ ಸಮೃದ್ಧಿಯ ಉತ್ತುಂಗದಲ್ಲಿಯೂ ಭಾರತವು ಯಾವುದೇ ದೇಶದ ಮೇಲೆ ದಾಳಿ ಮಾಡಲು ಯೋಚಿಸಲಿಲ್ಲ. ಏಕೆಂದರೆ ಜಗತ್ತಿಗೆ ಶಾಂತಿ ಬೇಕು ಎಂದು ನಾವು ದೃಢವಾಗಿ ನಂಬಿದ್ದೇವೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *