ಸ್ನೇಹಿತನ ಮನೆಗೆ ಹಬ್ಬದೂಟಕ್ಕೆ ಬಂದಿದ್ದ ನಾಲ್ವರು ಅಪಘಾತಕ್ಕೆ ಬಲಿ

ಮೈಸೂರು: ಲಾರಿ ಮತ್ತು ಎರಡು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಟಿ.ನರಸೀಪುರದ ಇಂಡವಾಳು ಬಳಿ ತಡರಾತ್ರಿ ಸಂಭವಿಸಿದೆ.

ಎಚ್.ಡಿ.ಕೋಟೆ ತಾಲೂಕಿನ ಕಂದೇಗಾಲ ನಿವಾಸಿ ರಾಘವೇಂದ್ರ (25), ಕಂಚಮಳ್ಳಿ ನಿವಾಸಿ ಮಧುಕುಮಾರ್ (19), ನಂಜನಗೂಡು ತಾಲೂಕಿನ ಹುರಾ ಗ್ರಾಮದ ಮಧು ಮತ್ತು ಒಡಿಸ್ಸಾ ಮೂಲದ ಅಹಮ್ಮದ್ ಖಾನ್ ಮೃತ ದುರ್ದೈವಿಗಳು.

ನಾಲ್ವರು ಯುವಕರು ತಮ್ಮ ತಮ್ಮ ಗ್ರಾಮದಿಂದ ಎರಡು ದ್ವಿಚಕ್ರ ವಾಹನದಲ್ಲಿ ಸ್ನೇಹಿತನ ಮನೆಗೆ ಹಬ್ಬಕ್ಕೆಂದು ಆಗಮಿಸಿದ್ದರು. ಸ್ನೇಹಿತನ ಮನೆಯಲ್ಲಿ ಹಬ್ಬ ಹಾಗೂ ಹಬ್ಬದೂಟ ಮುಗಿಸಿಕೊಂಡು ವಾಪಸ್ ಮಂಗಳವಾರ ರಾತ್ರಿ ಬೈಕಿನಲ್ಲಿ ಹೊರಟಿದ್ದರು. ಆದರೆ ಟಿ.ನರಸೀಪುರದ ಇಂಡವಾಳು ಬಳಿ ತಡರಾತ್ರಿ ಮೈಸೂರಿನಿಂದ ಬರುತ್ತಿದ್ದ ಲಾರಿ ಮತ್ತು ಬೈಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಟಿ.ನರಸೀಪುರ ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *