ಟಾಟಾ ಏಸ್ ಗೆ ಹಿಂಬದಿಯಿಂದ ಇಟಿಯೋಸ್ ಕಾರ್ ಡಿಕ್ಕಿ- ಇಬ್ಬರ ಸಾವು

ಬೆಂಗಳೂರು: ಟಾಟಾ ಏಸ್ ಗೆ ಹಿಂಬದಿಯಿಂದ ಇಟಿಯೋಸ್ ಕಾರ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಬೆಂಗಳೂರಿನ ಯಲಹಂಕ ಬಳಿಯ ವೆಂಕಟಾಲ ಫ್ಲೈಓವರ್ ಮೇಲೆ ನಡೆದಿದೆ.

ಚಾಲಕ ಪ್ರವೀಣ್(30) ಮತ್ತು ನಾರಾಯಣ ರಾವ್(40) ಮೃತ ದುದೈವಿಗಳು. ಮೃತ ನಾರಾಯಣ ರಾವ್ ಪತ್ನಿ ಮೀನಾಕ್ಷಿ ಮತ್ತು ಸಂಬಂಧಿ ಮಲ್ಲಿಕಾರ್ಜುನರ ಸ್ಥಿತಿ ಚಿಂತಾಜನಕವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಮಗ ಮಂಜುನಾಥ್ ಪ್ರಾಣಾಪಯದಿಂದ ಪಾರಾಗಿದ್ದಾನೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ನಾರಾಯಣ ರಾವ್ ಕುಟುಂಬ ಮಂಗಳವಾರ ಸಂಜೆ ಚಂದ್ರಲೇಔಟ್‍ನಲ್ಲಿರುವ ಸಂಬಂಧಿ ಮಲ್ಲಿಕಾರ್ಜುನ್ ರಾವ್ ಮನೆಗೆ ಬಂದಿದ್ದು, ಅಲ್ಲಿಂದ ಶಿರಡಿಗೆ ಪ್ರಯಾಣ ಬೆಳೆಸಿದ್ದರು. ಓಲಾ ಕ್ಯಾಬ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ್ಟಿದ್ದರು.

ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಸ್ಟೀಲ್ ಪೈಪ್‍ಗಳಿದ್ದ ಟಾಟಾ ಏಸ್ ಗಾಡಿಗೆ ಹಿಂಬದಿಯಿಂದ ಇಟಿಯೋಸ್ ಕಾರ್ ಡಿಕ್ಕಿ ಹೊಡೆದಿದೆ. ಆಗ ಸ್ಟೀಲ್ ಪೈಪ್‍ಗಳು ನುಗ್ಗಿದ್ದರಿಂದ ಮುಂದಿನ ಸೀಟಿನಲ್ಲಿ ಕುಳಿತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಾಲಕ ಪ್ರವೀಣ್ ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರದವರಾಗಿದ್ದು, ಇತ್ತೀಚಿಗಷ್ಟೆ ಮದುವೆಯಾಗಿ ಬೆಂಗಳೂರಿನ ನಾಗರಭಾವಿಯಲ್ಲಿ ವಾಸವಾಗಿದ್ದರು.

ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಟ್ಟಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

Comments

Leave a Reply

Your email address will not be published. Required fields are marked *