2 ಬೈಕ್‍ಗಳ ನಡುವೆ ಡಿಕ್ಕಿ, ಓರ್ವ ಸವಾರ ಸಾವು- ಕಾಪಾಡಿ ಕಾಪಾಡಿ ಎಂದ್ರೂ ಸಹಾಯಕ್ಕೆ ಬರ್ಲಿಲ್ಲ ಜನ

ಬೀದರ್: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಜನರು ಮಾನವೀಯತೆ ತೋರದೆ ಫೋಟೋ ತೆಗೆಯುತ್ತಿದ್ದ ಅಮಾನವೀಯ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ಶೆಂಬೆಳ್ಳಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೀದರ್‍ನಿಂದ ಒಬ್ಬ ಬೈಕ್ ಸವಾರ ಔರಾದ್ ಕಡೆಗೆ ತೆರೆಳುತ್ತಿದ್ದರು. ಮತ್ತಿಬ್ಬರು ಔರಾದ್‍ನಿಂದ ಬೀದರ್‍ಗೆ ಒಂದೇ ಬೈಕ್‍ನಲ್ಲಿ ಬರುತ್ತಿದ್ದರು. ಈ ಸಂದರ್ಭದಲ್ಲಿ ಶೆಂಬಳ್ಳಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇಬ್ಬರೂ ವೇಗವಾಗಿ ಬಂದು ಬೈಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ.

ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಒಂದು ಕಡೆ ಮತ್ತಿಬ್ಬರು ಇನ್ನೊಂದು ಕಡೆ ಬಿದ್ದಿದ್ದಾರೆ. ಇಬ್ಬರು ಬೈಕ್ ಸವಾರರು ರಕ್ತದ ಮಡುವಿನಲ್ಲಿ ಬಿದ್ದು ಕಾಪಾಡಿ, ಕಾಪಾಡಿ ಎಂದು ಬೇಡಿಕೊಂಡರೂ ಸಾರ್ವಜನಿಕರು ಸಹಾಯಕ್ಕೆ ಬಾರದೆ ಫೋಟೋ ತೆಗೆಯುತ್ತಾ, ಅವರನ್ನೇ ಬೈಯುತ್ತಾ ಅಮಾನವೀಯತೆ ತೋರಿದ್ದಾರೆ. ನಂತರ 45 ನಿಮಿಷಗಳ ಬಳಿಕ ಸ್ಥಳದಲ್ಲಿದ್ದವರು ಆಂಬುಲೆನ್ಸ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಒಬ್ಬ ಬೈಕ್ ಸವಾರ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಮತ್ತಿಬ್ಬರು ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ಸಂಬಂಧ ಸಂತಪೂರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *