ಉಪ ವಿಭಾಗ ದಂಡಾಧಿಕಾರಿ, ಟೀಮ್ ದುರ್ಗಾ ಕಾಲ್ನಡಿಗೆ- ಸಾರ್ವಜನಿಕರಲ್ಲಿ ಜಾಗೃತಿ

– ಲಾಠಿ ಬೀಸುವ ಬದಲು ಪೊಲೀಸರಿಂದ ಜಾಗೃತಿ

ಬಳ್ಳಾರಿ: ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದು, ಆದರೂ ಕೆಲವರು ತಮ್ಮ ವಾಹನಗಳ ಮೂಲಕ ರಸ್ತೆಗಿಳಿಯುತ್ತಿದ್ದಾರೆ. ಹೀಗಾಗಿ ಬಳ್ಳಾರಿಯಲ್ಲಿ ಪೊಲೀಸ್ ಇಲಾಖೆ ವಿಶೇಷ ತಂಡ ಟೀಮ್ ದುರ್ಗಾ ಜೊತೆಗೆ ಉಪವಿಭಾಗ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್ ಹಾಗೂ ಡಿವೈಎಸ್ಪಿ ವಿ.ರಘುಕುಮಾರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ಅನಗತ್ಯವಾಗಿ ಓಡಾಡುವ ಜನರಿಗೆ ಕೊರೊನಾ ವೈರಸ್ ಕುರಿತು ತಿಳುವಳಿಕೆ ನೀಡುತ್ತ ಕಾಲ್ನಡಿಗೆ ಮೂಲಕ ಸಿಟಿ ರೌಂಡ್ಸ್ ಹಾಕಿದರು.

ಹೊಸಪೇಟೆ ನಗರದಲ್ಲಿ ಭಾನುವಾರ ರಾತ್ರಿ ಶೇಖ್ ತನ್ವೀರ್ ಅಸೀಫ್ ಅವರು ಮೇನ್ ಬಜಾರ್, ವಾಲ್ಮೀಕಿ ವೃತ್ತ, ಡ್ಯಾಂ ರಸ್ತೆ, ವಿಜಯನಗರ ಕಾಲೇಜ್ ರಸ್ತೆ, ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ವಿವಿಧೆಡೆ ಕಾಲ್ನಡಿಗೆಯಲ್ಲಿ ವೀಕ್ಷಣೆ ಮಾಡಿದರು.

ಕೊರೊನಾ ವೈರಸ್ ಹೇಗೆ ಹರಡುತ್ತದೆ, ಮುಂಜಾಗೃತಾ ಕ್ರಮ ಹೇಗೆ ಕೈಗೊಳ್ಳಬೇಕು ಎಂಬುದರ ಕುರಿತು ಎಸಿ ಅವರು ಸಾರ್ವಜನಿಕರಗೆ ತಿಳಿಸಿದರು. ಅಲ್ಲದೆ ಸೆಕ್ಷನ್ 144 ಜಾರಿಯಲ್ಲಿದೆ ಯಾರು ತಿರುಗಾಡುವಂತಿಲ್ಲ. ನಿಮ್ಮ ಮನೆಯಲ್ಲೇ ಇರಬೇಕು. ತರಕಾರಿ, ಹಾಲು, ಔಷಧಿ, ಆಸ್ಪತ್ರೆ, ದಿನಸಿ ಅಂಗಡಿಗಳು ತೆಗೆದಿರುತ್ತವೆ. ಅವಶ್ಯಕತೆ ಇದ್ದವರು ಕುಟುಂಬದ ಯಾರಾದರು ಒಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ತೆಗದುಕೊಂಡು ಹೋಗಬಹುದು ಎಂದು ವಿವರಿಸಿದರು.

ನಾವೆಲ್ಲ ಇರುವುದು ನಿಮಗಾಗಿ, ಸರ್ಕಾರ ಇದರ ಬಗ್ಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಯಾರೂ ಆತಂಕ ಪಡುವುದು ಬೇಡ. ಮನೆ ಬಿಟ್ಟು ಬರಬಾರದು ಎಂದು ಮನವಿ ಮಾಡಿದರು. ಪೊಲೀಸ್ ಇಲಾಖೆಯ ಟೀಮ್ ದುರ್ಗಾ ಎಸಿ ಅವರಿಗೆ ಸಾಥ್ ನೀಡಿತು. ನಗರದ ಬಹುತೇಕ ಬಡಾವಣೆಗಳಿಗೆ ಅವರೊಂದಿಗೆ ಸಂಚರಿಸಿತು.

Comments

Leave a Reply

Your email address will not be published. Required fields are marked *