ಬರೋಬ್ಬರಿ 7 ಗಂಟೆ ಬೆಂಗ್ಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ – ಮಾರ್ಗ ಬದಲು

ಮಂಡ್ಯ: ಜಿಲ್ಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು -ಮೈಸೂರು ಹೆದ್ದಾರಿ ಬರೋಬ್ಬರಿ 7 ಗಂಟೆಗಳ ಕಾಲ ಬಂದ್ ಆಗಲಿದೆ.

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಕೆಆರ್ ಎಸ್‍ಗೆ ಬಾಗಿನ ಅರ್ಪಿಸಲಿದ್ದಾರೆ. ನಂತರ ಮಂಡ್ಯ ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಕಾರ್ಯಕ್ರಮಕ್ಕೆ ಬಸ್ ಮತ್ತು ಮಿನಿ ವಾಹನಗಳಲ್ಲಿ ಸುಮಾರು ಒಂದು ಲಕ್ಷ ಜನ ಆಗಮಿಸುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಮೈಸೂರು ಹೆದ್ದಾರಿ 275 ರಲ್ಲಿ ಆಗಬಹುದಾದ ವಾಹನ ದಟ್ಟಣೆ ಹಾಗೂ ಸುಗಮ ಸಂಚಾರ ಕಲ್ಪಿಸುವ ದೃಷ್ಟಿಯಿಂದ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬೆಂಗಳೂರಿನಿಂದ ಮೈಸೂರಿನ ಕಡೆಗೆ ಸಾಗುವಂತಹ ವಾಹನಗಳ ಮಾರ್ಗ ಬದಲು ಮಾಡಲಾಗಿದೆ.

ಬೆಂಗಳೂರಿನಿಂದ ಮೈಸೂರಿಗೆ ಹೋಗುವವರು ಮದ್ದೂರಿನ ಟಿ.ಬಿ.ಕ್ರಾಸ್- ಮಳವಳ್ಳಿ ಮಾರ್ಗವಾಗಿ ಹಾಗೂ ಮೈಸೂರಿನಿಂದ ಬೆಂಗಳೂರು ಕಡೆಗೆ ಸಾಗುವ ವಾಹನಗಳು ಕರಿಘಟ್ಟ ಜಂಕ್ಷನ್‍ನಿಂದ ಅರಕೆರೆ ಮಾರ್ಗವಾಗಿ ಮತ್ತು ಬನ್ನೂರು-ಬೆಂಗಳೂರು ಕಡೆಗೆ ಸಂಚಾರ ಮಾರ್ಗ ಬದಲಿಸಲು ಜಿಲ್ಲಾಧಿಕಾರಿ ಮಂಜುಶ್ರೀ ಅವರು ಆದೇಶ ಹೊರಡಿಸಿದ್ದಾರೆ.

ಇದೇ ಮೊದಲ ಬಾರಿಗೆ ಇಷ್ಟು ದೀರ್ಘಾವಧಿವರೆಗೂ ಬಂದ್ ಮಾಡಿದ್ದಾರೆ. ಇವತ್ತು ಆಷಾಢ ಶುಕ್ರವಾರವಾಗಿರುವುದರಿಂದ ಅನೇಕ ಜನರಿಗೆ ಓಡಾಡುವುದು ತುಂಬಾ ತೊಂದರೆಯಾಗುತ್ತಿದೆ. ವಾಹನ ಸವಾರರಿಗೆ ಸಮಯ ಮತ್ತು ಹಣವೂ ವ್ಯರ್ಥವಾಗುತ್ತದೆ. ಇದರಿಂದ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ವಾಹನಗಳ ದಟ್ಟಣೆ ನಿರ್ಮಾಣವಾಗಿದೆ. ಇದನ್ನು ಅರಿತುಕೊಂಡು ಆದಷ್ಟು ಬೇಗ ಮುಖ್ಯಮಂತ್ರಿಗಳು ವಾಪಸ್ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬದಲು ಮಾರ್ಗ
* ಬೆಂಗಳೂರು-ಮೈಸೂರು – ಮದ್ದೂರಿನ ಟಿ.ಬಿ.ಕ್ರಾಸ್- ಮಳವಳ್ಳಿ ಮಾರ್ಗ
* ಮೈಸೂರು-ಬೆಂಗಳೂರು – ಕರಿಘಟ್ಟ ಜಂಕ್ಷನ್‍ನಿಂದ ಅರಕೆರೆ ಮಾರ್ಗ

Comments

Leave a Reply

Your email address will not be published. Required fields are marked *