ಲೋಕಸಭಾ ಚುನಾವಣಾ ಪೂರ್ವ ಮೈತ್ರಿಗೆ ಕಾಂಗ್ರೆಸ್, ಆಪ್ ಮಾತುಕತೆ!

ನವದೆಹಲಿ: ಕರ್ನಾಟಕ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ 2019ರ ಲೋಕಸಭಾ ಚುನಾವಣೆಗೆ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಪ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಮಾತುಕತೆ ನಡೆಸಿದೆ ಎನ್ನಲಾಗಿದೆ.

ಕಾಂಗ್ರೆಸ್ ಹಾಗೂ ಇತರೆ ಪ್ರಾದೇಶಿಕ ಪಕ್ಷಗಳು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೊಡೆ ತಟ್ಟಿ ಲೋಕಸಭಾ ಚುನಾವಣಾ ತಯಾರಿ ಶುರು ಮಾಡಿದ್ದಾರೆ. 2015 ರಲ್ಲಿ ಬಿಹಾರದಲ್ಲಿ ಆದ ಮಹಾಘಟಬಂಧನ್ ನಂತರ ಉಪಚುನಾವಣೆಗಳಲ್ಲಿ ವಿರೋಧಿ ಪಕ್ಷಗಳು ಒಟ್ಟಾಗಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿರುವುದು ಹಾಗೂ ರಾಜ್ಯದಲ್ಲಿ ಆಗಿರುವ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ.

ಮೇ24 ರಂದು ಕಾಂಗ್ರೆಸ್ ನ ಜೈ ರಾಮ್ ರಮೇಶ್ ಮತ್ತು ಅಜಯ್ ಮಕೇನ್ ಆಪ್ ಪಕ್ಷದ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ಆಪ್ ಗೆ 5 ಸ್ಥಾನ, ಕಾಂಗ್ರೆಸ್ ಗೆ 2 ಸ್ಥಾನ ಎಂದು ಆಪ್ ಕಾಂಗ್ರೆಸ್ ಮುಂದಿಟ್ಟಿದೆ. ಕಾಂಗ್ರೆಸ್ 7 ರಲ್ಲಿ 3 ಸ್ಥಾನವನ್ನು ಕೇಳಿದ್ದು ನವದೆಹಲಿಯಿಂದ ಶರ್ಮಿಷ್ಠ ಮುಖರ್ಜಿ, ಚಾಂದನಿ ಚೌಕ್ ನಿಂದ ಅಜಯ್ ಮಾಕೆನ್, ನಾರ್ಥ್ ವೆಸ್ಟ್ ದೆಹಲಿಯಿಂದ ರಾಜಕುಮಾರ ಚೌಹಾನ್ ಗೆ ಟಿಕೆಟ್ ಬಯಸಿದೆ ಎನ್ನಲಾಗಿದೆ.

ಈ ಮಾತುಕತೆಗೆ ಪೂರಕ ಎಂಬಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೇಶದ ಜನರು ವಿದ್ಯಾವಂತ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. 2013 ರಲ್ಲಿ ತನ್ನದೇ ಸರ್ಕಾರದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ತಿಳಿಯುವಲ್ಲಿ ಮನಮೋಹನ್ ಸಿಂಗ್ ಸೋತರು ಎಂದು ಟೀಕಿಸಿದ್ದರು.

Comments

Leave a Reply

Your email address will not be published. Required fields are marked *