ಎಂಪಿ ಟಿಕೆಟ್ ನೀಡಲು 6 ಕೋಟಿ ಪಡೆದ್ರು ಕೇಜ್ರಿವಾಲ್: ಆಪ್ ಅಭ್ಯರ್ಥಿ ಪುತ್ರನಿಂದ ಆರೋಪ

ನವದೆಹಲಿ: ಪಶ್ಚಿಮ ದೆಹಲಿ ಲೋಕಸಭಾ ಟಿಕೆಟ್‍ಗಾಗಿ ನನ್ನ ತಂದೆ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿ (ಎಎಪಿ)ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ 6 ಕೋಟಿ ರೂ. ನೀಡಿದ್ದಾರೆ ಎಂದು ಎಎಪಿ ಅಭ್ಯರ್ಥಿ ಪುತ್ರ ದೂರಿದ್ದಾರೆ.

ಈ ಆರೋಪವನ್ನು ಪಶ್ಚಿಮ ದೆಹಲಿ ಕ್ಷೇತ್ರದ ಎಎಪಿ ಅಭ್ಯರ್ಥಿ ಬಲ್‍ಬೀರ್ ಸಿಂಗ್ ಜಾಖರ್ ಅವರ ಪುತ್ರ ಉದಯ್ ಮಾಡಿದ್ದಾರೆ. ದೆಹಲಿ ಲೋಕಸಭಾ ಕ್ಷೇತ್ರಗಳ ಮತದಾನವು ಭಾನುವಾರ ನಡೆಯಲಿದೆ. ಚುನಾವಣಾ ಅಭ್ಯರ್ಥಿಯ ಪುತ್ರನೇ ಈ ಆರೋಪ ಮಾಡಿದ್ದು, ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ನನ್ನ ತಂದೆ ಇತ್ತೀಚೆಗೆ ರಾಜಕೀಯ ಪ್ರವೇಶ ಮಾಡಿದ್ದಾರೆ. ಆಗ ಅರವಿಂದ್ ಕೇಜ್ರಿವಾಲ್ ಅವರಿಗೆ ನನ್ನ ತಂದೆ 6 ಕೋಟಿ ರೂ. ಪಾವತಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ನನ್ನ ಬಳಿ ಇವೆ ಎಂದು ಉದಯ್ ತಿಳಿಸಿದ್ದಾರೆ.

ಹಣವನ್ನು ನೇರವಾಗಿ ಅರವಿಂದ್ ಕೇಜ್ರಿವಾಲ್ ಹಾಗೂ ಗೋಪಾಲ್ ರಾಯ್ ಅವರಿಗೆ ನೀಡಲಾಗಿದೆ. ಈ ವಿಚಾರ ಪ್ರಸಾರವಾದ ಬಳಿಕ ನನ್ನನ್ನು ಮನೆಯೊಳಗೆ ಇರುಲು ಬಿಡುತ್ತಾರೋ ಇಲ್ಲವೋ ಗೊತ್ತಿಲ್ಲ. ಈ ಮಾಹಿತಿಯನ್ನು ದೇಶದ ಜನರ ಮುಂದೆ ಹೇಳಿಕೊಳ್ಳಬೇಕಾಗಿರುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣಾ ಟಿಕೆಟ್ ಅಷ್ಟೇ ಅಲ್ಲ, ವಿವಿಧ ಚುನಾವಣೆ ವೇಳೆಯೂ ಅಭ್ಯರ್ಥಿಗಳಿಂದ ಹಣ ಪಡೆಯಲಾಗುತ್ತಿದೆ. ಭ್ರಷ್ಟಚಾರ ವಿರುದ್ಧ ಬಂದ ಪಕ್ಷವೇ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದರು.

ಬಲ್‍ಬೀರ್ ಸಿಂಗ್ ಜಾಖರ್ ಅವರು ಪುತ್ರ ಉದಲ್ ಆರೋಪವನ್ನು ತಳ್ಳಿ ಹಾಕಿದ್ದಾರೆ. ಉದಯ್ ನನ್ನ ಜೊತೆಗೆ ವಾಸಿಸುತ್ತಿಲ್ಲ. ನಾನು ಅಭ್ಯರ್ಥಿಯಾಗುವ ಕುರಿತು ಯಾವತ್ತೂ ಆತನ ಜೊತೆಗೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *