ಪ್ರವಾಹ ಸಂತ್ರಸ್ತರಿಗೆ ಅಮೀರ್‌ರಿಂದ 25 ಲಕ್ಷ ರೂ. – ಲತಾರಿಂದ 11 ಲಕ್ಷ ರೂ. ದೇಣಿಗೆ

ಮುಂಬೈ: ಮಹಾರಾಷ್ಟ್ರ ಪ್ರವಾಹಕ್ಕೆ ಸಂತ್ರಸ್ತರಿಗೆ ಬಾಲಿವುಡ್ ನಟ ಅಮೀರ್ ಖಾನ್ ಅವರು 25 ಲಕ್ಷ ರೂ. ಹಾಗೂ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು 11 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಅಮೀರ್ ಖಾನ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ನಿಧಿಗೆ 25 ಲಕ್ಷ ರೂ. ಸಹಾಯಧನ ನೀಡಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ಪ್ರವಾಹ ಸಂತ್ರಸ್ತರಿಗಾಗಿ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ ಅಮೀರ್ ಖಾನ್ ಅವರಿಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

ನಟ ಅಮೀರ್ ಖಾನ್ ಅಲ್ಲದೆ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಕೂಡ ಮಹಾರಾಷ್ಟ್ರ ಪ್ರವಾಹಕ್ಕೆ 11 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ದೇವೇಂದ್ರ ಅವರು ಈ ಬಗ್ಗೆ ಕೂಡ ತಮ್ಮ ಟ್ವಿಟ್ಟಿರಿನಲ್ಲಿ, “ಸಿಎಂ ಪರಿಹಾರ ನಿಧಿಗೆ 11 ಲಕ್ಷ ರೂ. ದೇಣಿಗೆ ನೀಡಿದ ಗೌರವಾನ್ವಿತ ಲತಾ ಮಂಗೇಶ್ಕರ್ ದೀದಿಗೂ ಧನ್ಯವಾದಗಳು” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

ಇದೇ ತಿಂಗಳು 12ರಂದು ಸ್ಟಾರ್ ಜೋಡಿ ನಟ ರಿತೇಶ್ ದೇಶ್‍ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಮಹಾರಾಷ್ಟ್ರ ಪ್ರವಾಹ ಸಂತ್ರಸ್ತರಿಗೆ 25 ಲಕ್ಷ ರೂ. ದೇಣಿಗೆ ನೀಡಿದ್ದರು. ಸಿಎಂ ದೇವೇಂದ್ರ ಅವರು ತಮ್ಮ ಟ್ವಿಟ್ಟರಿನಲ್ಲಿ, “ಮಹಾರಾಷ್ಟ್ರ ಪ್ರವಾಹಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ ಜೆನಿಲಿಯಾ ಹಾಗೂ ರಿತೇಶ್‍ಗೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿಕೊಂಡಿದ್ದರು.

ಬಳಿಕ ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಕೂಡ ಸಿಎಂ ಪರಿಹಾರ ನಿಧಿಗೆ 51 ಲಕ್ಷ ರೂ. ದೇಣಿಗೆ ನೀಡಿದ್ದರು. ಈ ವಿಷಯವನ್ನು ಅಮಿತಾಬ್ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಈ ವಿಷಯವನ್ನು ಟ್ವೀಟ್ ಮಾಡುವ ಮೂಲಕ ಎಲ್ಲರಿಗೂ ತಿಳಿಸಿದ್ದರು. ಅಮಿತಾಬ್ ಅಲ್ಲದೆ ನಟ ನಾನಾ ಪಾಟೇಕರ್ ಅವರು ಕೂಡ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 500 ನಿವಾಸಗಳನ್ನು ಕಟ್ಟಿಕೊಡುವ ಭರವಸೆಯನ್ನು ನೀಡಿದ್ದಾರೆ.

Comments

Leave a Reply

Your email address will not be published. Required fields are marked *