ಇನ್ನು ಮುಂದೆ ದನಗಳಿಗೂ ಆಧಾರ್- ಕೇಂದ್ರದಿಂದ ಸುಪ್ರೀಂಗೆ ಪ್ರಸ್ತಾಪ

ನವದೆಹಲಿ: ದನಗಳ ರಕ್ಷಣೆ ಮಾಡಲು ಮತ್ತು ಅಕ್ರಮ ಸಾಗಾಟವನ್ನು ತಪ್ಪಿಸಲು ಆಧಾರ್ ನಂತಹ ಗುರುತು ಪತ್ರವನ್ನು ನೀಡುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಸ್ತಾವನೆ ಸಲ್ಲಿಸಿದೆ.

ಭಾರತ- ಬಾಂಗ್ಲಾದೇಶ ಗಡಿಯಲ್ಲಿ ಹಸುವಿನ ರಕ್ಷಣೆ ಮತ್ತು ಜಾನುವಾರು ಕಳ್ಳಸಾಗಾಣಿಗೆ ತಡೆಯುವ ಸಂಬಂಧ ಇಂದು ಕೇಂದ್ರ ಸರ್ಕಾರ ವರದಿ ಸಲ್ಲಿಸಿದೆ.

ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಯನ್ನು ಒಳಗೊಂಡ ಸಮಿತಿ ದನಗಳಿಗೂ ಆಧಾರ್ ಕಾರ್ಡ್ ನೀಡುವಂತೆ ಶಿಫಾರಸು ಮಾಡಿದೆ ಎಂದು ತಿಳಿಸಿದೆ. ಈ ಕಾರ್ಡ್ ನಿಂದಾಗಿ ದನಗಳನ್ನು ಪತ್ತೆ ಮಾಡಲು ಸಹಕಾರಿಯಾಗುತ್ತದೆ ಅಷ್ಟೇ ಅಲ್ಲದೇ ಕಳ್ಳ ಸಾಗಾಣಿಕೆಯನ್ನು ತಡೆಯಬಹುದು ಎಂದು ಕೇಂದ್ರ ಹೇಳಿದೆ.

ಈ ಆಧಾರ್ ಕಾರ್ಡ್ ನಲ್ಲಿ ದನದ ವಯಸ್ಸು, ತಳಿ, ಲಿಂಗ, ಸ್ಥಳ, ಎತ್ತರ, ದೇಹ, ಬಣ್ಣ, ಕೊಂಬುವಿನ ಮಾಹಿತಿ ಇರಲಿದೆ.

ಇದೇ ವೇಳೆ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಟ 500 ದನಗಳು ಉಳಿದಿಕೊಳ್ಳುವ ಸಂಬಂಧ ವಸತಿ ನಿರ್ಮಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎನ್ನುವ ಅಂಶ ವರದಿಯಲ್ಲಿದೆ. ಇದೇ ವೇಳೆ ಕೇಂದ್ರ ಸರ್ಕಾರ ತೊಂದರೆಗೀಡಾದ ರೈತರಿಗೂ ನೂತನ ಯೋಜನೆಯನ್ನು ಆರಂಭಿಸುವುದಾಗಿ ತಿಳಿಸಿದೆ.

ದನಗಳಿಗೆ ಆಧಾರ್ ನೀಡಬೇಕೆಂಬ ಪ್ರಸ್ತಾಪ ಕಳೆದ ವರ್ಷವೇ ಚರ್ಚೆಯಲ್ಲಿತ್ತು. ಆದರೆ ಈ ಪ್ರಸ್ತಾಪಕ್ಕೆ ಕೆಲ ವಿರೋಧಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಅನುಷ್ಠಾನಗೊಂಡಿರಲಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ದನಗಳಿಗೆ ಆಧಾರ್ ನೀಡುವ ಬಗ್ಗೆ ಸುಪ್ರೀಂಗೆ ವರದಿ ಸಲ್ಲಿಸಿದೆ.

ವಿಮೆ ಗುರುತಿನ ಸಂಖ್ಯೆ ಈಗ ಇದೆ: ಪ್ರಸ್ತುತ ಜಾನುವಾರು ವಿಮೆ ಮಾಡಿಸುವ ಸಂದರ್ಭದಲ್ಲಿ ದನದ ಕಿವಿಗೆ ಗುರುತಿನ ಸಂಖ್ಯೆ ಇರುವ ಒಲೆಯನ್ನು ಹಾಕಿಸಲಾಗುತ್ತದೆ. ಈ ಸಂದರ್ಭದಲ್ಲಿ ರೈತನೊಂದಿಗೆ ಓಲೆ ಸಹಿತದ ದನದ ಫೋಟೋವನ್ನು ಕಡ್ಡಾಯವಾಗಿ ತೆಗೆಯಬೇಕಾಗುತ್ತದೆ. ಈ ಫೋಟೋವನ್ನು ವಿಮಾ ಕಂಪೆನಿಗಳಿಗೆ ನೀಡಲಾಗುತ್ತದೆ.

Comments

Leave a Reply

Your email address will not be published. Required fields are marked *