ಹಾಸನದಲ್ಲಿ ಕಾಡಾನೆಗಳ ಹಾವಳಿ: ಆರ್‍ಎಫ್‍ಓ ಕಚೇರಿಗೆ ಮುತ್ತಿಗೆ ಹಾಕಿ ಗ್ರಾಮಸ್ಥರ ಪ್ರತಿಭಟನೆ

ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ವಿಪರೀತ ಹೆಚ್ಚಾಗಿದೆ. ಹಾವಳಿ ತಡೆಯೋಕೆ ಅರಣ್ಯಾಧಿಕಾರಿಗಳಿಗೂ ಆಗುತ್ತಿಲ್ಲ. ಹೀಗಾಗಿ ಆನೆಗಳಿಂದ ತೊಂದರೆಗೊಳಗಾದ ಗ್ರಾಮಸ್ಥರು ಆರ್‍ಎಫ್‍ಓ ಹಾಗೂ ಸಿಬ್ಬಂದಿಗೆ ಅಹೋರಾತ್ರಿ ದಿಗ್ಬಂಧನ ಹಾಕಿ ಪ್ರತಿಭಟಿಸಿದ್ದಾರೆ.

ಹಾಸನ ಜಿಲ್ಲೆಯ ಹಲವೆಡೆ ಮತ್ತೆ ಕಾಡಾನೆಗಳ ಕಾಟ ಮುಂದುವರೆದಿದೆ. ಆಲೂರು ತಾಲೂಕು ಹೈದೂರು, ಕಾಡ್ಲೂರು ಸುತ್ತಮುತ್ತ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಭತ್ತ, ಬಾಳೆ, ಕಾಫಿ, ಮೆಣಸು ಸೇರಿದಂತೆ ಲಕ್ಷಾಂತರ ಪ್ರಮಾಣದ ಬೆಳೆ ಹಾನಿ ಮಾಡಿವೆ. ಇದರಿಂದ ರೋಸಿ ಹೋಗಿದ್ದ ಹೈದೂರು, ಕಾಡ್ಲೂರು ಗ್ರಾಮಗಳ ಸಂತ್ರಸ್ತರು ಕಳೆದ ರಾತ್ರಿ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಆಲೂರು ಆರ್‍ಎಫ್‍ಓ ಹೇಮಂತ್ ಹಾಗೂ ಸಿಬ್ಬಂದಿಯನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಪ್ರತಿಭಟಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಡಿಎಫ್‍ಓ ಮಂಜುನಾಥ್, ಸ್ಥಳೀಯ ಶಾಸಕ ಹೆಚ್‍ಕೆ ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರೈತರು ಬೆಳೆನಷ್ಟ, ಸಾವು ನೋವು ಆದಾಗ ಮಾತ್ರ ಬರುತ್ತೀರಿ ಎಂದು ತಮ್ಮ ಆಕ್ರೋಶ ಹೊರ ಹಾಕಿದರು. ಆದರೆ ಶಾಸಕರು ಹಾಗೂ ಅಧಿಕಾರಿಗಳು ಆನೆ ಹಿಡೀತಿವಿ. ಬೆಳೆ ಪರಿಹಾರ ಕೊಡಿಸ್ತೀವಿ ಅಂತಾ ಜನರನ್ನು ಸಮಾಧಾನ ಮಾಡಿದರು.

Comments

Leave a Reply

Your email address will not be published. Required fields are marked *