ಸಿಇಟಿ, ನೀಟ್, ಜೆಇಇ ಪರೀಕ್ಷೆ: ದಯಾನಂದ ಸಾಗರ್ ಕಾಲೇಜಿನಲ್ಲಿ ಸಿಗಲಿದೆ ಮಾಹಿತಿ

ಬೆಂಗಳೂರು: ನೀವು ಸಿಇಟಿ, ನೀಟ್, ಜೆಇಇ, ಡಿಸ್ಯಾಟ್ ಪರೀಕ್ಷೆಗಳ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೀರಾ? ಈ ಪರೀಕ್ಷೆಗಳ ಬಗ್ಗೆ ಮಾಹಿತಿ ಬೇಕೇ? ಹಾಗಿದ್ದರೆ ಮಾರ್ಚ್ 19ರ ಸೋಮವಾರ ಕೂಡ್ಲು ಗೇಟ್ ಹೊಸೂರು ಮುಖ್ಯ ರಸ್ತೆಯಲ್ಲಿರುವ ದಯಾನಂದ ಸಾಗರ್ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಮಾಹಿತಿ ಪಡೆದುಕೊಳ್ಳಿ.

ದೇಶದ ಪರಿಣತ ಶಿಕ್ಷಕರಾದ `ಸೂಪರ್ 30′ ಖ್ಯಾತಿಯ ಪ್ರೊ. ಆನಂದ್ ಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ವಿದ್ಯಾರ್ಥಿಗಳ ಸಂದೇಹವನ್ನು ನಿವಾರಿಸಲಿದ್ದಾರೆ.

ಬಿಹಾರದ ಪಾಟ್ನಾದಲ್ಲಿರುವ ರಾಮಾನುಜಮ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ ಶಾಲೆಯ ಸಂಸ್ಥಾಪಕರಾಗಿರುವ ಆನಂದ್ ಕುಮಾರ್ ದೇಶದ ಪ್ರಸಿದ್ಧ ಗಣಿತಶಾಸ್ತ್ರಜ್ಞ ಮತ್ತು ಅಂಕಣಗಾರರಾಗಿ ಗುರುತಿಸಿಕೊಂಡಿದ್ದಾರೆ. ಆನಂದ್ ಕುಮಾರ್ ಅವರು ತಮ್ಮ `ಸೂಪರ್ 30′ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ದೇಶದ ಹಿಂದುಳಿದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ, ಅವರನ್ನು ಜೆಇಇ ಪರೀಕ್ಷೆಗೆ ಸಿದ್ಧ ಪಡಿಸುತ್ತಾರೆ. ಟೈಮ್ ಮ್ಯಾಗಜಿನ್ ಗುರುತಿಸಿದ ದೇಶದ ನಾಲ್ಕು ಉತ್ತಮ ಗಣಿತ ಶಾಲೆಗಳ ಪೈಕಿ ರಾಮಾನುಜಮ್ ಶಾಲೆಯೂ ಸೇರಿದೆ.

ಪ್ರೊ. ಆನಂದ್ ಕುಮಾರ್ ಅವರ ಜೀವನ ಚರಿತ್ರೆಯನ್ನು ಆಧಾರಿಸಿ ಚಿತ್ರ ನಿರ್ಮಾಣವಾಗುತ್ತಿದೆ. ಹೃತಿಕ್ ರೋಶನ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರ 2019ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಈ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ಮಕ್ಕಳ ಪೋಷಕರು ಹಾಗೂ ಪಿಯು ಕಾಲೇಜಿನ ಶಿಕ್ಷಕರು ಭಾಗವಹಿಸಲು ಅವಕಾಶವಿದೆ. ಸೋಮವಾರ ಎರಡು ಸೆಷನ್ ನಲ್ಲಿ ಕಾರ್ಯಕ್ರಮ ನಡೆಯುತ್ತದೆ. ಮೊದಲ ಅವಧಿಯನ್ನು ಪ್ರೊ. ಆನಂದ್ ಕುಮಾರ್ ನಡೆಸಿಕೊಡಲಿದ್ದು, ಎರಡನೆಯ ಅವಧಿಯಲ್ಲಿ ರಾಜ್ಯದ ಪ್ರಸಿದ್ದ ಶೈಕ್ಷಣಿಕ ತಜ್ಞ, ಬೇಸ್ ಸಂಸ್ಥಾಪಕ ಮತ್ತು ನಿರ್ದೇಶಕ ಡಾ. ಹೆಚ್.ಎಸ್ ನಾಗರಾಜ್, ವಿಟಿಯು ಮಾಜಿ ಕುಲಪತಿ ಪ್ರೊ.ಎಚ್.ಪಿ ಕಿಂಚ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದರೆ ನೊಂದಣಿ ಮಾಡಬೇಕಾಗುತ್ತದೆ. ಕುಮಾರಸ್ವಾಮಿ ಲೇಔಟ್ ಕ್ಯಾಂಪಸ್, ಕನಕಪುರ ರಸ್ತೆಯ ರವಿಶಂಕರ್ ಅಶ್ರಮದ ಬಳಿ ಇರುವ ಕ್ಯಾಂಪಸ್, ಕೂಡ್ಲುಗೇಟ್ ಬಳಿ ಇರುವ ಕ್ಯಾಂಪಸ್ ಮತ್ತು ವಿವಿ ಪುರಂ ನಲ್ಲಿರುವ ಕೆರಿಯರ್ ಕೆಫೆಯಲ್ಲಿ ನೊಂದಣಿ ಮಾಡಬಹುದು. ಆನ್‍ಲೈನ್ ಮೂಲಕ www.dsu.edu.in ಭೇಟಿ ನೀಡಿ ನೊಂದಣಿ ಮಾಡಿಕೊಳ್ಳಬಹುದು.

 

Comments

Leave a Reply

Your email address will not be published. Required fields are marked *