ಹಾಡು ಹೇಳಲು ಬಂದ 7 ತಿಂಗ್ಳ ಗರ್ಭಿಣಿ – ವೇದಿಕೆಯಲ್ಲೇ ಸೀಮಂತ

ಬೆಂಗಳೂರು: ಹಾಡು ಹಾಡಲು ಏಳು ತಿಂಗಳ ಗರ್ಭಿಣಿ ಆಗಮಿಸಿದ್ದು, ಅವರಿಗೆ ವೇದಿಕೆಯ ಮೇಲೆಯೇ ಸೀಮಂತ ಮಾಡಿರುವ ಅಪರೂಪದ ಘಟನೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಕಾರ್ಯಕ್ರಮದಲ್ಲಿ ನಡೆದಿದೆ.

ಭಾನುವಾರ ‘ಸರಿಗಮಪ ಸೀಸನ್ 15’ ರ ಮೆಗಾ ಆಡಿಷನ್ ಪ್ರಸಾರವಾಗಿತ್ತು. ಈ ಆಡಿಷನ್ ನಲ್ಲಿ 7 ತಿಂಗಳ ಗರ್ಭಿಣಿ ಸಂಧ್ಯಾ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇದೇ ಮೊದಲ ಬಾರಿ ಈ ಕಾರ್ಯಕ್ರಮದಲ್ಲಿ ಗರ್ಭಿಣಿ ಬಂದು ಹಾಡು ಹಾಡಿದ್ದಾರೆ. ಗರ್ಭಿಣಿ ಸಂಧ್ಯಾ ಅವರ ಆತ್ಮಸ್ಥೈರ್ಯ ನೋಡಿ ಎಲ್ಲರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಸಂಧ್ಯಾ ಅವರು ಮೊದಲ ಆಡಿಷನ್ ನಲ್ಲಿ ಆಯ್ಕೆಯಾಗಿದ್ದರು. ಮೆಗಾ ಆಡಿಷನ್ ನಲ್ಲಿ ಸಂಧ್ಯಾ ‘ನಮ್ಮೂರ ಮಂದಾರ ಹೂವೆ’ ಸಿನಿಮಾದ ‘ಓಂಕಾರದಿ’ ಹಾಡನ್ನು ಹಾಡಿದ್ದಾರೆ. ನಂತರ ತುಂಬು ಗರ್ಭಿಣಿ ಸಂಧ್ಯಾ ಅವರಿಗೆ ವಾಹಿನಿ ಕಡೆಯಿಂದ ಸೀಮಂತ ಮಾಡಲಾಗಿದೆ.

”ಸರಿಗಮಪದ ಶೋದ ಎಲ್ಲ ಎಪಿಸೋಡ್ ಗಳನ್ನು ನೋಡು, ಕೇಳಿ ಆನಂದಪಡು. ಅದನ್ನು ನಿನ್ನ ಮಗುವಿಗೆ ಧಾರೆ ಏರಿ. ದೇವಭಾಷೆಯನ್ನು ಅನುವಾದಿಸಿ ಕರ್ನಾಟಕಕ್ಕೆ ಕೊಡು. ಆಲ್ ದಿ ಬೆಸ್ಟ್” ಎಂದು ಮಹಾಗುರುಗಳಾದ ಹಂಸಲೇಖ ಅವರು ಹೇಳಿ ಹಾರೈಸಿದ್ದಾರೆ.

“ಒಂದು ಗಾಯನದ ದೃಷ್ಟಿಕೋನದಿಂದ ನೋಡಿದರೆ ಇನ್ನು ಸ್ವಲ್ಪ ಸಾಧನೆ ಬೇಕು. ಆದರೆ ಹಾಡಿಗಿಂತ ಬಹು ಮುಖ್ಯವಾದ ಕೆಲಸವನ್ನು ಭಗವಂತ ನಿಮಗೆ ನೀಡಿದ್ದಾನೆ. ನಿಮಗೆ ಆಯಸ್ಸು, ಆರೋಗ್ಯ ಎಲ್ಲವನ್ನು ದೇವರು ನೀಡಲಿ ಅಂತ ಕೇಳಿಕೊಳ್ಳುತ್ತೇನೆ” ಎಂದು ವಿಜಯ್ ಪ್ರಕಾಶ್ ಶುಭಾಶಯವನ್ನು ತಿಳಿಸಿದ್ದಾರೆ. ಇನ್ನು ಅರ್ಜುನ್ ಜನ್ಯ ಅವರು ನಿಮ್ಮ ಜೊತೆಗೆ ನಿಮ್ಮ ಮಗು ಕೂಡ ವೇದಿಕೆ ಮೇಲೆ ಬಂದಿದೆ. ಅದು ತುಂಬ ದೊಡ್ಡ ವಿಷಯ ಎಂದಿದ್ದಾರೆ.

ನಿಮ್ಮ ಹಾಡು ಕೇಳಿ ನನಗೆ ನಮ್ಮ ತಾಯಿ ನೆನಪಾದರು. ನಾನು ನಮ್ಮ ತಾಯಿಯ ಹೊಟ್ಟೆಯಲ್ಲಿ ಇದ್ದಾಗ ಎಂಟು ತಿಂಗಳವರೆಗೆ ಅವರು ಸಂಗೀತ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಆ ನೆನಪು ನನಗೆ ಮೂಡುವಂತೆ ಮಾಡಿದ್ದೀರಾ. ನಿಮ್ಮ ಉತ್ಸಾಹವನ್ನು ಮೆಚ್ಚಬೇಕು ಎಂದು ರಾಜೇಶ್ ಕೃಷ್ಣನ್ ಅವರು ಹೇಳಿದ್ದಾರೆ.

ಸಂಧ್ಯಾ ಅವರು ಮೆಗಾ ಆಡಿಷನ್ ನಲ್ಲಿ ಆಯ್ಕೆ ಆಗಲಿಲ್ಲ. ವೇದಿಕೆಯ ಮೇಲೆ ಪತ್ನಿಯ ಸೀಮಂತ ಮಾಡಿದಕ್ಕೆ ಅವರ ಪತಿ ವಿಷ್ಣು ಕೂಡ ಸಂತಸ ವ್ಯಕ್ತಪಡಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *