ಜೀವಂತ ಮೀನಿಗೆ ಔಷಧಿ ಹಚ್ಚಿ ರೋಗಿಗಳ ಬಾಯಿಗೆ ಇಟ್ರೆ ಖಾಯಿಲೆ ವಾಸಿ!

ಬೀದರ್: ನಾಟಿ ವೈದ್ಯರೊಬ್ಬರು ಅಸ್ತಮಾದಂತಹ ರೋಗಗಳಿಗೆ ಬೀದರ್‍ನಲ್ಲಿ ವಿಶೇಷ ಚಿಕಿತ್ಸೆ ನೀಡುತ್ತಿದ್ದಾರೆ.

ಶ್ಯಾಮ ಸುಂದರ್ ಜೀವಂತ ಮೀನುಗಳನ್ನು ನೀಡಿ ಚಿಕಿತ್ಸೆ ನೀಡುತ್ತಿರುವ ನಾಟಿ ವೈದ್ಯರು. ಸುಮಾರು 40 ವರ್ಷಗಳಿಂದ ಜೀವಂತ ಮೀನಿಗೆ ಔಷಧಿ ಹಚ್ಚಿ ರೋಗಿಗಳ ಬಾಯಿಗೆ ಹಾಕುತ್ತಾರೆ. ಈ ಮೂಲಕ ಅಸ್ತಮಾ, ಧಮ್ಮು ಮತ್ತು ಕೆಮ್ಮು ಕಾಯಿಲೆಗೆ ಶಾಶ್ವತ ಪರಿಹಾರ ಕೊಡುತ್ತಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾವ ದಿನ ಮೀನಿನ ಚಿಕಿತ್ಸೆ ತೆಗೆದುಕೊಳ್ಳಬೇಕು?
ಪ್ರತಿ ವರ್ಷ ಮುಂಗಾರು ಮಳೆ ಆರಂಭದ ಮೃಗಾಶೀರ ಜೇಷ್ಠ ಮಾಸದಂದು ಒಂದು ದಿನ ಮಾತ್ರ ಈ ಔಷದೋಪಚಾರ ನಡೆಯುತ್ತೆ. ಹೀಗಾಗಿ ಚಿಕಿತ್ಸೆ ಪಡೆಯಲು ನೆರೆಯ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಇಲ್ಲಿ ಚಿಕಿತ್ಸೆ ಪಡೆದವರಿಗೆ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ ಬರೋದಿಲ್ಲವಂತೆ. ಕಳೆದ ನಾಲ್ಕು ದಶಕಗಳಿಂದ ತಮ್ಮ ಪೂರ್ವಜರು ಈ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ ಎಂದು ಶ್ಯಾಮ್ ಸುಂದರ್ ಹೇಳುತ್ತಾರೆ.

ಈ ಚಿಕಿತ್ಸೆ ಅಲೋಪತಿಕ್ ವೈದ್ಯರಿಂದ ಅಸಾಧ್ಯವಂತೆ. ವೈದ್ಯರ ಬಳಿ ಹೋದರೂ ವಾಸಿಯಾಗದ ಕಾಯಿಲೆಗಳು ಈ ಜೀವಂತ ಮೀನು ತಿಂದರೆ ವಾಸಿಯಾಗುತ್ತದೆ ಎನ್ನುವ ನಂಬಿಕೆಯಿದೆ. ನಾಟಿ ವೈದ್ಯ ಶ್ಯಾಮ್ ಸುಂದರ್ ಹಲವು ವರ್ಷಗಳಿಂದ ಉಚಿತ ಚಿಕಿತ್ಸೆ ನೀಡುತ್ತಿರುವುದು ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.

ವೈದ್ಯರ ಬಳಿ ಹೋದರೆ ಅಸ್ತಮಾ ರೋಗಕ್ಕೆ ಸಾಕಷ್ಟು ಪರೀಕ್ಷೆ ಮಾಡುತ್ತಾರೆ. ಅಲ್ಲದೇ ವರ್ಷಗಟ್ಟಲೆ ಚಿಕಿತ್ಸೆ ನೀಡುತ್ತಾ ಹಣ ಸುಲಿಯುತ್ತಾರೆ. ಆದರೂ ರೋಗ ಗುಣಮುಖವಾಗುವ ಲಕ್ಷಣದ ಭರವಸೆ ಇರುವುದಿಲ್ಲ. ನಾಟಿ ವೈದ್ಯ ಶ್ಯಾಮ್ ಸುಂದರ್ ನೀಡುವ ಈ ಮೀನಿನ ಚಿಕಿತ್ಸೆಯಿಂದ ನಮ್ಮ ರೋಗ ನಿವಾರಣೆಯಾಗಿದೆ ಎಂದು ಇವರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದ ಹಲವರು ಹೇಳುತ್ತಾರೆ.

Comments

Leave a Reply

Your email address will not be published. Required fields are marked *