ಯಾದಗಿರಿಯಲ್ಲಿ 13 ವರ್ಷದ ಬಾಲಕಿಯೊಬ್ಬಳ ನಿಗೂಢ ಸಾವು!

ಯಾದಗಿರಿ: 13 ವರ್ಷದ ಬಾಲಕಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣ ಯಾದಗಿರಿ ತಾಲೂಕು ಸೈದಾಪುರ ಸಮೀಪದ ಕಡೇಚೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಮ್ಮ ಮಗಳ ಮೇಲೆ ಹಾಡಹಗಲೇ ಅತ್ಯಾಚಾರಗೈದು ಕೊಲೆ ಮಾಡಿ ನಂತರ ನೇಣು ಬಿಗಿದು ಇದೊಂದು ಆತ್ಮಹತ್ಯೆ ಪ್ರಕರಣವೆಂಬಂತೆ ಬಿಂಬಿಸಲಾಗುತ್ತಿದ್ದು, ಇದನ್ನು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸುವಂತೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬಾಲಕಿಯ ತಂದೆ ದೂರು ಸಲ್ಲಿಸಿದ್ದಾರೆ.

ಫೆ. 2ರಂದು ಕಡೇಚೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ಬಡ- ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಳು. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿತ್ತು.

ಈ ಬಗ್ಗೆ ಅಂದು ಯಾವುದೇ ದೂರು ದಾಖಲಿಸದೆ ಇತ್ತ ಮರಣೋತ್ತರ ಪರೀಕ್ಷೆಯನ್ನೂ ನಡೆಸದೆ ತರಾತುರಿಯಲ್ಲಿ ಶವಸಂಸ್ಕಾರ ಮಾಡಲಾಗಿತ್ತು. ವಿಚಿತ್ರವೆಂದರೆ ಗ್ರಾಮದ `ಸಾಹುಕಾರ’ನ ಮಧ್ಯಸ್ಥಿಕೆಯಲ್ಲಿ ರಾಜೀ ಪಂಚಾಯ್ತಿ ನಡೆಸಿ ಒಂದಿಷ್ಟು ಪರಿಹಾರ ಕೊಟ್ಟು ಇಡೀ ಪ್ರಕರಣವನ್ನೇ ಮುಚ್ಚಿ ಹಾಕುವ ಹುನ್ನಾರಗಳು ನಡೆದಿವೆ ಎನ್ನಲಾಗಿದೆ.

ಸದ್ಯ ಬಾಲಕಿಯ ತಂದೆಯ ದೂರನ್ನು ಆಧರಿಸಿ ಯಾದಗಿರಿ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತನಿಖೆಗೆ ಮುಂದಾಗಿದ್ದಾರೆ. ಮುದ್ದಿನ ಮಗಳು ಅಮಾನುಷ ಕೃತ್ಯವೊಂದಕ್ಕೆ ಬಲಿಯಾದರೂ ಸಹ ಆರೋಪಿಗಳು ಬಲಿಷ್ಠರು ಎಂಬ ಕಾರಣಕ್ಕಾಗಿ ಅವರ ವಿರುದ್ಧ ಪೋಷಕರು ಧ್ವನಿ ಎತ್ತಿರಲಿಲ್ಲ.

ಶಾಲೆಯ ಪಠ್ಯ ಚಟುವಟಿಕೆಗಳ ಜೊತೆಗೆ ಕಬಡ್ಡಿ ಹಾಗೂ ಗುಂಡು ಎಸೆತದಲ್ಲಿ ಚಾಂಪಿಯನ್ ಆಗಿದ್ದ ಬಾಲಕಿಯ ನಿಗೂಢ ಸಾವಿನ ಬಗ್ಗೆ ಗ್ರಾಮದಲ್ಲಿ ಬಹುತೇಕರು ಮೌನಕ್ಕೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನೋಸ್ಥಿತಿಯ ಹುಡುಗಿ ಆಕೆ ಅಲ್ಲವೇ ಅಲ್ಲ ಎಂಬ ಮಾತುಗಳು ಅಲ್ಲಿ ಕೇಳಿಬರುತ್ತವೆ. ಆದ್ರೆ ಘಟನೆಯ ಕುರಿತು ಮಾತನಾಡಲು ಗ್ರಾಮಸ್ಥರು ಹಿಂದೇಟು ಹಾಕುತ್ತಿರುವುದು ಮತ್ತಷ್ಟೂ ಅನುಮಾನಗಳಿಗೆ ಕಾರಣವಾಗಿದೆ.

Comments

Leave a Reply

Your email address will not be published. Required fields are marked *