ರೀ ನೀವು ಭಾಷಣ ಮಾಡಿ ಹೋಗ್ತೀರಿ – ಸಿದ್ದರಾಮಯ್ಯ ಭಾಷಣಕ್ಕೆ ವ್ಯಕ್ತಿಯಿಂದ ಅಡ್ಡಿ

ಬಾಗಲಕೋಟೆ: ರೀ ನೀವು ಭಾಷಣ ಮಾಡಿ ಹೋಗುತ್ತೀರಿ. ಆದರೆ ಅಧಿಕಾರಿಗಳು ಕೆಲಸವನ್ನೇ ಮಾಡುವುದಿಲ್ಲ ಅಂತ ಕೂಗಿ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭಾಷಣಕ್ಕೆ ವ್ಯಕ್ತಿಯೊಬ್ಬ ಅಡ್ಡಿ ಪಡಿಸಿದ್ದಾನೆ.

ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಿಮ್ಮ ಊರಿಗೆ ಒಳಚರಂಡಿ ವ್ಯವಸ್ಥೆ ಹಾಗೂ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಸಿಕ್ಕಿರಲಿಲ್ಲ ಎಂದು ಹೇಳಿದರು.

ಈ ವೇಳೆ ಗುಂಪಿನಲ್ಲಿ ಕೊನೆಗೆ ನಿಂತಿದ್ದ ವ್ಯಕ್ತಿಯೊರ್ವ ಭಾಷಣಕ್ಕೆ ಅಡ್ಡಿಪಡಿಸಿ, ನೀವು ಹೋದ ಮೇಲೆ ಯಾರು ಇಲ್ಲಿಗೆ ಬರಲ್ಲ. ನೀವು ಹೇಳಿ ಹೋಗ್ತೀರಿ. ಇದಾದ ಮೇಲೆ ಅಧಿಕಾರಿಗಳು ಕೇರ್ ಮಾಡಲ್ಲ. ನೀವು ಇದ್ದಾಗ ಮಾತ್ರ ಇದೆಲ್ಲಾ ಡ್ರಾಮಾ ಮಾಡ್ತಾರೆ ಎಂದು ಮೂರು ಬಾರಿ ಕೂಗಿ ಹೇಳಿದ.

ಭಾಷಣಕ್ಕೆ ಅಡ್ಡಿಪಡಿಸಿದ್ದ ವ್ಯಕ್ತಿಯ ವಿರುದ್ಧ ಗರಂ ಆದ ಸಿದ್ದರಾಮಯ್ಯ, ಹೇ ಸುಮ್ನಿರಪ್ಪಾ ಎಷ್ಟು ಸಾರಿ ಮಾತಾಡ್ತೀಯಾ ಎದುರು ಬಂದು ಮಾತಾಡು. ನಿನ್ನಂತವರ ಸಮಸ್ಯೆ ಕೇಳುವುದಕ್ಕೆ ಅಂತಲೇ ನಾನು ಇಲ್ಲಿಗೆ ಬಂದಿದ್ದು ಎಂದು ಗುಡುಗಿ ಆತನನ್ನು ಆಚೆಗೆ ಕಳುಹಿಸಿ ಅಂತ ಪೊಲೀಸರಿಗೆ ಸೂಚನೆ ನೀಡಿದರು.

ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ, ಈ ಕಡೆ ಕೇಳಿ, ಆ ಕಡೆ ನೋಡಬೇಡಿ. ನಿಮ್ಮನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಅವನಾ ಅಥವಾ ನಾನೇ ಎಂದು ಸಭಿಕರನ್ನು ಪ್ರಶ್ನಿಸಿದರು. ನಾನು ನಿಮ್ಮನ್ನ ಉದ್ದೇಶಿಸಿ ಮಾತನಾಡಲು ಬಂದಿದ್ದೇನೆ. ನೀವು ನನ್ನ ಮಾತನ್ನು ಕೇಳಬೇಕು ಎಂದು ಹೇಳಿ ತಮ್ಮ ಭಾಷಣ ಮುಂದುವರಿಸಿದರು. ಮಾಜಿ ಸಿಎಂ ಅವರಿಂದ ಸೂಚನೆ ಬರುತ್ತಿದ್ದಂತೆ ಪೊಲೀಸರು ಆ ವ್ಯಕ್ತಿಯನ್ನ ಹೊರಗೆ ಕಳುಹಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *