ಪೊಲೀಸರ ಮನೆಯ ಕಬ್ಬಿಣ ಕದ್ದು ಸಿಕ್ಕಿಬಿದ್ದ ವಕೀಲ!

ಚಿಕ್ಕೋಡಿ: ಪೊಲೀಸರೊಬ್ಬರು ಮನೆ ಕಟ್ಟಲು ತಂದಿಟ್ಟಿದ್ದ ಕಬ್ಬಿಣವನ್ನು ವಕೀಲನೊಬ್ಬ ಕದ್ದ ಅಚ್ಚರಿಯ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ಜಿಲ್ಲೆಯ ಅಥಣಿ ಪಟ್ಟಣದ ಸತ್ಯಪ್ರಮೋದ ನಗರದ ಪೊಲೀಸ್ ಪೇದೆ ಮಲ್ಲಿಕಾರ್ಜುನ ಗುಟ್ಟೋಳಗಿ ಎಂಬುವರ ಮನೆ ನಿರ್ಮಾಣದ ಹಂತದಲ್ಲಿತ್ತು. ಕಟ್ಟಡ ನಿರ್ಮಾಣಕ್ಕೆ ಮನೆಯ ಪಕ್ಕದಲ್ಲಿ ಕಬ್ಬಿಣವನ್ನು ತಂದು ಹಾಕಲಾಗಿತ್ತು. ಇದನ್ನೇ ಕಾಯುತ್ತಿದ್ದ ವಕೀಲ ರಮೇಶ್ ಪಡಸಲಗಿ (38) ಪೊಲೀಸರ ಮನೆಯ 1 ಟನ್ ಕಬ್ಬಿಣವನ್ನೇ ಕಳ್ಳತನ ಮಾಡಿದ್ದಾನೆ.

ರಾತ್ರಿ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ವಕೀಲನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ವಕೀಲ ಕಬ್ಬಿಣದ ಜೊತೆಗೆ ಸೋಲಾರ್ ಯಂತ್ರವನ್ನೂ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಥಣಿ ಪೊಲೀಸ್ ಠಾಣೆಯಲ್ಲಿ ವಕೀಲ ರಮೇಶ್ ವಿರುದ್ಧ ಐಪಿಸಿ ಸೆಕ್ಷನ್ 379 ಅಡಿ(ಕಳ್ಳತನಕ್ಕೆ ದಂಡನೆ) ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಕಳ್ಳ ವಕೀಲ ರಮೇಶ್ ಕದ್ದ 3 ಲಕ್ಷ ರೂ ಮೌಲ್ಯದ ಕಬ್ಬಿಣ ಹಾಗೂ ಸೋಲಾರ್ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ವಕೀಲನ ವಿರುದ್ಧ ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪಿ ವಕೀಲ ರಮೇಶ್ ಗೆ ಅಥಣಿ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

Comments

Leave a Reply

Your email address will not be published. Required fields are marked *