ಬಾಡಿಗೆದಾರರಿಗೆ ಎಲೆಕ್ಟ್ರಿಸಿಟಿ, ನೀರು ಕಟ್ ಮಾಡಿ ಅಪ್ಪ-ಮಗನಿಂದ ನಿತ್ಯ ಕಿರುಕುಳ

ಬೆಂಗಳೂರು: ಅಪ್ಪ-ಮಗ ಸೇರಿ ಬಾಡಿಗೆದಾರರಿಗೆ ಎಲೆಕ್ಟ್ರಿಸಿಟಿ, ನೀರು ಕಟ್ ಮಾಡಿ ನಿತ್ಯ ಕಿರುಕುಳ ನೀಡುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹೊಸಕೆರೆಹಳ್ಳಿಯ ರವೀಶ್ ಕುಟುಂಬಕ್ಕೆ ದಿನನಿತ್ಯ ಕಾಟ ತಪ್ಪಿದ್ದಿಲ್ಲ. ಬಸವೇಗೌಡರ ಮನೆಯಲ್ಲಿ 10 ಲಕ್ಷ ರೂ. ಭೋಗ್ಯಕ್ಕೆ ರವೀಶ್ ಕುಟುಂಬ ವಾಸವಾಗಿದ್ದಾರೆ. ಈ ಹಿಂದೆ ಮನೆಗೆ ನುಗ್ಗಿ ಹೆಣ್ಮಕ್ಕಳ ಮೇಲೆ ಹಲ್ಲೆ ನಡೆಸಿ ಮನೆ ಸಾಮಾನುಗಳನ್ನು ಮಗ ಮಹೇಶ್ ಹೊರಗೆ ಹಾಕಿದ್ದನು. ಇಂದು ಬಸವೇಗೌಡ ಹೆಲ್ಮೆಟ್ ಹಾಕಿಕೊಂಡು ಬಂದು ನೀರಿನ ಮೋಟರ್ ತೆಗೆದುಕೊಂಡು ಹೋಗಿದ್ದಾನೆ.

ಬಸವೇಗೌಡರ ಮಗ ಮಹೇಶ ಸೆ.3 ರಂದು 30 ರಿಂದ 40 ಜನರನ್ನು ಮನೆಗೆ ನುಗ್ಗಿಸಿ ಮನೆ ಖಾಲಿ ಮಾಡುವಂತೆ ದಾಂಧಲೆ ಎಬ್ಬಿಸಿದ್ದನು ಹಾಗೂ ರವೀಶ್‍ರ ಗರ್ಭಿಣಿ ಪತ್ನಿ ಲಕ್ಷ್ಮೀ ಹಾಗು ಅಜ್ಜಿ ಲಿಂಗಮ್ಮರಿಗೆ ಥಳಿಸಿ ಮನೆ ಸಾಮಾನುಗಳನ್ನು ಹೊರಗೆ ಹಾಕಿದ್ದನು.

ನಮ್ಮ ಹಣ ಕೊಡಿ ನಾವು ಖಾಲಿ ಮಾಡುತ್ತೀವಿ ಎಂದರೆ ಹಣ ಕೊಡದೆ ಬಸವೇಗೌಡ ವಂಚಿಸುತ್ತಿದ್ದಾನೆ. ಪಬ್ಲಿಕ್ ಟಿವಿಯಲ್ಲಿ ಈ ಬಗ್ಗೆ ವರದಿಯಾದ ನಂತರ ಮಹೇಶನನ್ನು ಅರೆಸ್ಟ್ ಮಾಡಲಾಗಿತ್ತು. ತಲೆ ಮರೆಸಿಕೊಂಡಿದ್ದ ಬಸವೇಗೌಡ ನಿರೀಕ್ಷಣಾ ಜಾಮೀನು ಪಡೆದು, ಅಂದಿನಿಂದ ಒಂದಿಲ್ಲೊಂದು ಕಾಟ ಕೋಡುತ್ತಿದ್ದಾನೆ ಎನ್ನಲಾಗಿದೆ.

ವಾರದ ಹಿಂದೆ ನೀರಿನ ಮೋಟರ್ ಫ್ಯೂಸ್ ಕಿತ್ತುಕೊಂಡು ಹೋಗಿದ್ದ. ಆದರೆ ಇಂದು ಬೆಳಗಿನ ಜಾವ ಹೆಲ್ಮೆಟ್ ಹಾಕಿಕೊಂಡು ಬಂದು ನೀರಿನ ಮೋಟರ್ ಕಿತ್ತುಕೊಂಡು ಹೋಗಿದ್ದಾನೆ. ಬಸವೇಗೌಡನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಸವೇಗೌಡ ಎಲೆಕ್ಟ್ರಿಸಿಟಿ ಹಾಗೂ ನೀರು ನೀಡದೆ ಬಾಡಿಗೆದಾರರಿಗೆ ಕಿರುಕುಳ ನೀಡ್ತಿದ್ದಾನೆ. ಈ ಮೂಲಕ ಭೋಗ್ಯಕ್ಕೆ ಕೊಟ್ಟಿರೋ ಹಣ ಹೊಡೆಯೊ ಪ್ಲಾನ್ ಮಾಡಿದ್ದಾನೆ. ಗಿರಿನಗರ ಪೊಲೀಸರು ಎಲ್ಲಾ ಗೊತ್ತಿದ್ದೂ ಕಣ್ಮುಚ್ಚಿ ಕುಳಿತು ಬಸವೇಗೌಡನಿಗೆ ಸಹಕಾರ ನೀಡುತ್ತಿದ್ದಾರೆ. ನಮ್ಮ ಹಣ ವಾಪಸ್ ಕೊಡಿಸಿ ಮನೆ ಖಾಲಿ ಮಾಡುತ್ತೀವಿ ಎಂದು ಹೇಳಿದರೂ ಪೊಲೀಸರು ಕ್ಯಾರೆ ಎನ್ನುತ್ತಿಲ್ಲ.

Comments

Leave a Reply

Your email address will not be published. Required fields are marked *