ನಟ ಸುದೀಪ್ ಗಾಗಿ ಉಪವಾಸ ಕುಳಿತ ಅಭಿಮಾನಿ- ವಿಷಯ ತಿಳಿದ ಕಿಚ್ಚ ಹೀಗಂದ್ರು

ಬೆಂಗಳೂರು: ನಾನು ಅಭಿಮಾನಿಗಳ ಅಭಿಮಾನಿ ಎನ್ನುವ ಮಾತನ್ನ ನಟ ಕಿಚ್ಚ ಸುದೀಪ್ ಹೇಳಿದ್ದರು. ಆದರೆ ಸ್ಟಾರ್ ನಟರಿಗೆ ಕೆಲವೊಮ್ಮೆ ಅಭಿಮಾನಿಗಳನ್ನ ನಿಭಾಯಿಸುವುದೇ ತಲೆನೋವಾಗಿ ಪರಿಣಮಿಸಿಬಿಡುತ್ತದೆ. ಸದ್ಯಕ್ಕೆ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಯೊಬ್ಬರ ಅತಿರೇಕದ ನಡವಳಿಕೆ ತಲೆನೋವಾಗಿದೆ.

ನಟ ಕಿಚ್ಚನಿಗಾಗಿ ಉಪವಾಸ ಮಾಡುತ್ತೇನೆ ಎಂದು ಅಭಿಮಾನಿಯೊಬ್ಬರು ನಿರ್ಧಾರ ಮಾಡಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸುದೀಪ್ ಅವರನ್ನ ಭೇಟಿ ಮಾಡಬೇಕು ಎನ್ನುವ ಉದ್ದೇಶದಿಂದ ಉಪವಾಸ ಮಾಡಲು ಮುಂದಾಗಿದ್ದಾರೆ. ಉಪವಾಸದ ಉದ್ದೇಶ ಕಿಚ್ಚನನ್ನು ಭೇಟಿಯಾಗುವುದು.

ಸುದೀಪ್ ಅಭಿಮಾನಿಯಾದ ಕನಕಪುರ ಬಳಿಯ ಸಾತನೂರಿನ ನಾಗಸೊಂಡೆ ಗ್ರಾಮದ ನಿವಾಸಿ ಕಿಚ್ಚ ಶಿವು ಉಪವಾಸ ಮಾಡುತ್ತೇನೆ ಎಂದು ಮುಂದಾಗಿದ್ದಾರೆ. ಸುದೀಪ್ ಅವರನ್ನ ನೋಡಬೇಕು ಎಂದು ಈ ರೀತಿ ಮಾಡುತ್ತಿದ್ದಾನೆ ಎಂದು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.

ಸುದೀಪ್ ಗಾಗಿ ಉಪವಾಸ ಮಾಡುತ್ತೇನೆ ಎಂದು ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಇತರೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದೀಪ್ ಅವರನ್ನು ಭೇಟಿ ಮಾಡಲು ಸಾವಿರ ದಾರಿಯಿದೆ. ಅದನ್ನ ಬಿಟ್ಟು ಈ ರೀತಿ ಮಾಡುವುದು ತಪ್ಪು ಎಂದಿದ್ದಾರೆ.

ತಮಗಾಗಿ ಉಪವಾಸ ಕುಳಿತಿದ್ದ ಅಭಿಮಾನಿಯ ವಿಚಾರ ತಿಳಿದ ನಟ ಸುದೀಪ್ “ನೀವು ಚೆನ್ನಾಗಿದ್ದರೆ ನನಗೆ ಖುಷಿ. ಉಪವಾಸ ಮಾಡಿ ನನಗೆ ನೋವು ಕೊಡಬೇಡಿ. ಭೇಟಿ ಮಾಡಲು ಬೇಕಾಗಿರುವುದು ಸಮಯ, ಪ್ರೀತಿ ಹಾಗೂ ತಾಳ್ಮೆ. ನಿಮ್ಮೆಲ್ಲರ ಪ್ರೀತಿಗೆ ಸದಾ ಚಿರಋಣಿ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಹೆಬ್ಬುಲಿ ಸಿನಿಮಾ ಬಿಡುಗಡೆ ಆದ ನಂತರ ಸುದೀಪ್, ಅಭಿಮಾನಿಗಳಿಗೆ ಧನ್ಯವಾದ ಹೇಳಲು ಕೆಲ ಊರಿಗಳಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ನಮ್ಮ ಊರಿಗೆ ಬರಲಿಲ್ಲ ಎನ್ನುವ ಉದ್ದೇಶದಿಂದ ಅಭಿಮಾನಿಯೊಬ್ಬರು ಪೆಟ್ರೋಲ್ ಸುರಿದುಕೊಂಡು ಸಾಯಲು ಮುಂದಾಗಿದ್ದರು. ಆಗ ಕಿಚ್ಚ ಅವರನ್ನ ಮನೆ ಬಳಿ ಕರೆಸಿಕೊಂಡು ಬುದ್ಧಿವಾದ ಹೇಳಿದ್ದರು.

Comments

Leave a Reply

Your email address will not be published. Required fields are marked *