ನಾಯಿ ಬೇಟೆಯಾಡಲು ಬಂದಿದ್ದ ಚಿರತೆ ಮನೆಯೊಳಗಡೆಯೇ ಸಿಕ್ಕಿಹಾಕೊಳ್ತು!

ಹಾಸನ: ಚಿರತೆಯೊಂದು ನಾಯಿಯನ್ನು ಬೇಟೆಯಾಡುವ ಭರದಲ್ಲಿ ಮನೆಗೆ ನುಗ್ಗಿ, ಅಲ್ಲಿಯೇ ಬಂಧಿಯಾಗಿರುವ ಘಟನೆ ತಾಲೂಕಿನ ವಿ.ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವೇಲಾಪುರಿ ಗೌಡರ ಮನೆಯಲ್ಲಿ ಚಿರತೆ ಬಂಧಿಯಾಗಿದೆ. ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ನಾಯಿಯನ್ನು ಬೇಟೆಯಾಡಲು ಚಿರತೆ ದನದ ಕೊಟ್ಟಿಗೆ ಮೂಲಕ ಮನೆಗೆ ನುಗ್ಗಿದ್ದು, ಅಲ್ಲಿಯೇ ಸಿಕ್ಕಿಬಿದ್ದಿದೆ.

ಚಿರತೆ ನಾಯಿಯನ್ನು ಬೇಟೆಯಾಡಲು ಮನೆಗೆ ನುಗ್ಗಿದೆ. ಆದರೆ ನಾಯಿ ತಪ್ಪಿಸಿಕೊಂಡು ಹೋಗಿದೆ. ಮನೆಯಲ್ಲಿ ಮಲಗಿದ್ದ ಕೃಷ್ಣ ಮತ್ತು ಆತನ ಅಣ್ಣ ನಾಯಿ ಬೊಗಳುತ್ತಿದ್ದರಿಂದ ಗಾಬರಿಯಾಗಿ ಹೊರಗೆ ಬಂದಿದ್ದಾರೆ. ಚಿರತೆ ಮನೆಯೊಳಗೆ ಹೊಕ್ಕಿರುವುದು ಗೊತ್ತಾಗುತ್ತಿದ್ದಂತೆಯೇ ಮನೆಗೆ ಬೀಗ ಹಾಕಿ, ಗ್ರಾಮಸ್ಥರನ್ನು ಎಚ್ಚರಿಸಿದ್ದಾರೆ. ಬೆಳಗ್ಗೆಯವರೆಗೆ ಗ್ರಾಮಸ್ಥರು ಜಿಟಿ ಜಿಟಿ ಮಳೆಯಲ್ಲಿ ಕೊಡೆ ಹಿಡಿದು, ಚಿರತೆ ತಪ್ಪಿಸಿಕೊಂಡು ಹೋಗದಂತೆ ಕಾವಲು ಕಾದಿದ್ದಾರೆ.

ಬೆಳಗ್ಗೆ ಕೆಲ ಗ್ರಾಮಸ್ಥರು ಮನೆಯ ಹೆಂಚು ತೆಗೆದು ಚಿರತೆ ಇರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಸದ್ಯ ಚಿರತೆ ಮನೆಯ ಅಟ್ಟದ ಮೇಲೆ ಅಡಗಿ ಕುಳಿತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ಮನೆಯ ಸುತ್ತ ಕಾವಲು ನಿಂತಿದ್ದಾರೆ. ಅರವಳಿಕೆ ವೈದ್ಯರು ಆಗಮಿಸಿದ್ದು, ಚಿರತೆ ಸೆರೆ ಹಿಡಿಯುವ ಕಾರ್ಯಚರಣೆ ಆರಂಭವಾಗಿದೆ. ಗ್ರಾಮಸ್ಥರಲ್ಲಿ ಒಂದೆಡೆ ಕೌತುಕ ಮತ್ತೊಂದೆಡೆ ಆತಂಕ ಮನೆ ಮಾಡಿದೆ.

ಮೂರು ವರ್ಷಗಳ ಹಿಂದೆ ಇದೇ ಗ್ರಾಮದಲ್ಲಿ 7 ವರ್ಷದ ಬಾಲಕ ಚಿರತೆಗೆ ಬಲಿಯಾಗಿದ್ದನು.

Comments

Leave a Reply

Your email address will not be published. Required fields are marked *