ತೋಟದ ಮನೆಗೆ ಹೋಗಿ ಬರ್ತೀನಿ ಅಂತ ಹೇಳಿ ಹೋದ ಬಾಲಕ ನಾಪತ್ತೆ

ಮಂಡ್ಯ: ತೋಟದ ಮನೆಗೆ ಹೋಗಿ ಬರ್ತೀನಿ ಅಂತಾ ಹೇಳಿ ಹೋದ ಬಾಲಕ ಇದ್ದಕ್ಕಿದ್ದಂತೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಪಾಂಡವಪುರ ತಾಲೂಕಿನ ಕಜ್ಜಿಕೊಪ್ಪಲು ಗ್ರಾಮದಲ್ಲಿ ಶನಿವಾರ ಸಂಜೆ ಗ್ರಾಮದ ಬೊಮ್ಮೆಗೌಡ ಎಂಬವರ ಮಗ ಲಿಂಗರಾಜು ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಎರಡು ದಿನದಿಂದ ಎಷ್ಟು ಹುಡುಕಾಡಿದರೂ ಆತನ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಇದೀಗ ಮಗ ಕಾಣದೇ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಬಾಲಕ ಚಿನಕುರುಳಿಯ ಎಸ್‍ಟಿಜಿ ಸ್ಕೂಲ್‍ನಲ್ಲಿ ಏಳನೇ ತರಗತಿ ಓದುತ್ತಿದ್ದು, ಶನಿವಾರ ಸಂಜೆ ಶಾಲೆಯಿಂದ ಮನೆಗೆ ವಾಪಾಸ್ ಬಂದಿದ್ದಾನೆ. ಬಳಿಕ ಶಿಕ್ಷಕರು ನೀಡಿದ್ದ ಪ್ರಾಜೆಕ್ಟ್ ತಯಾರಿಸಲು ಕಬ್ಬಿಣದ ಮೊಳೆಗಳನ್ನ ಕೊಡುವಂತೆ ತಾಯಿಯಲ್ಲಿ ಹೇಳಿದ್ದಾನೆ. ಆದ್ರೆ, ತಾಯಿ ಕೊಟ್ಟ ಮೊಳೆ ಚೆನ್ನಾಗಿಲ್ಲವೆಂದು ಆತ ತೋಟದ ಮನೆಯಿಂದ ಮೊಳೆ ತರೋದಾಗಿ ಹೇಳಿ ಸಹೋದರನೊಂದಿಗೆ ಹೋಗಿದ್ದಾನೆ.

ಅರ್ಧ ದಾರಿಯಲ್ಲಿ ಸಹೋದರ ವಾಪಾಸ್ ಮನೆಗೆ ಬಂದಿದ್ದಾನೆ. ಹೀಗಾಗಿ ಲಿಂಗರಾಜು ಒಬ್ಬನೇ ತೋಟದ ಮನೆ ಕಡೆ ಹೊರಟಿದ್ದಾನೆ. ಆ ಬಳಿಕ ಲಿಂಗರಾಜು ನಾಪತ್ತೆಯಾಗಿದ್ದಾನೆ. ಅತ್ತ ತೋಟದ ಮನೆಗೂ ಹೋಗದೇ, ಇತ್ತ ಮನೆಗೂ ಬಾರದಿರುವುದನ್ನು ಗಮನಿಸಿದ ಪಾಲಕರು ಆತಂಕಕ್ಕೀಡಾಗಿ ಹುಡುಕಾಟ ಆರಂಭಿಸಿದ್ದಾರೆ. ಇತ್ತ ಲಿಂಗರಾಜು ತೋಟದ ಮನೆ ಕಡೆಗೆ ಹೋಗುವುದನ್ನು ನೋಡಿರೋ ಸ್ಥಳೀಯರು ಆತನ ಹಿಂದೆ ಹೋದಂತಹ ಕಾರಿನ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ.

ಆದ್ರೆ ಮಗನ ಸುಳಿವು ಸಿಗದ ಕಾರಣ ಪೋಷಕರು ಇದೀಗ ಮೇಲುಕೋಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

 

 

Comments

Leave a Reply

Your email address will not be published. Required fields are marked *