ಸರ್ಕಾರ ಪೊಲೀಸರ ಮೇಲೆ ಒತ್ತಡ ಹೇರಿ ಈಶ್ವರಪ್ಪಗೆ ಕ್ಲೀನ್ ಚಿಟ್ ಕೊಡಿಸಿದೆ: ಎಎಪಿ

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ನೀಡಿರುವ ಪೊಲೀಸರ ನಡೆಯನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯು ಬೃಹತ್ ಪ್ರತಿಭಟನೆ ನಡೆಸಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಎಪಿಯ ಬೆಂಗಳೂರು ನಗರ ರಾಜಕೀಯ ಚಟುವಟಿಕೆಗಳ ಅಧ್ಯಕ್ಷ ಚನ್ನಪ್ಪ ಗೌಡ ನೆಲ್ಲೂರು, ಕಳಂಕಿತ ಸಚಿವ ಈಶ್ವರಪ್ಪರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ರಾಜ್ಯ ಸರ್ಕಾರ ಹುನ್ನಾರ ಮಾಡಿದ್ದು, ಇದಕ್ಕಾಗಿಯೇ ಪೊಲೀಸರ ಮೇಲೆ ಒತ್ತಡ ಹೇರಿ ಕ್ಲೀನ್ ಚಿಟ್ ಕೊಡಿಸಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಮುನ್ನ ಸಂತೋಷ್‍ರವರು ಈಶ್ವರಪ್ಪ ವಿರುದ್ಧ ವಾಟ್ಸಪ್‍ನಲ್ಲಿ ಡೆತ್‍ನೋಟ್ ಕಳುಹಿಸಿರುವುದನ್ನು ಪೊಲೀಸರೇ ದೃಢಪಡಿಸಿದ್ದಾರೆ. ಆದರೂ ಕೂಡ ಈಶ್ವರಪ್ಪನವರ ವಿಚಾರಣೆಯನ್ನೂ ನಡೆಸದೇ ಕ್ಲೀನ್ ಚಿಟ್ ನೀಡಿರುವುದು ಖಂಡನೀಯ. ಅಕ್ರಮ ಎಸಗುವವರ ಪರವಾಗಿದ್ದೇವೆ ಎಂಬ ಕೆಟ್ಟ ಸಂದೇಶವನ್ನು ರಾಜ್ಯ ಬಿಜೆಪಿ ಸರ್ಕಾರ ಈ ಮೂಲಕ ರವಾನಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣ – ಕೋರ್ಟ್‌ಗೆ ಬಿ ರಿಪೋರ್ಟ್‌ ಸಲ್ಲಿಕೆ; ಈಶ್ವರಪ್ಪಗೆ ಕ್ಲೀನ್‌ ಚಿಟ್‌

ಘಟನೆ ನಡೆದಾಗಲೇ ಈಶ್ವರಪ್ಪನವರ ಬೆನ್ನಿಗೆ ನಿಂತಿದ್ದ ಬಿಜೆಪಿ ಸರ್ಕಾರವು, ತನಿಖೆಗೂ ಮುನ್ನವೇ ಈಶ್ವರಪ್ಪನವರನ್ನು ನಿರಪರಾಧಿ ಎಂದು ಘೋಷಿಸಿತ್ತು. ನಂತರ ಆಮ್ ಆದ್ಮಿ ಪಾರ್ಟಿಯು ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದಾಗ ಈಶ್ವರಪ್ಪನವರ ರಾಜೀನಾಮೆ ಪಡೆದಿತ್ತು. ಆದರೆ ಕೇವಲ ಕಾಟಾಚಾರಕ್ಕೆ ತನಿಖೆ ನಡೆಸಿ ಸಂತೋಷ್ ಪಾಟೀಲ್‍ರವರ ಕುಟುಂಬಕ್ಕೆ ಅನ್ಯಾಯವೆಸಗಿದೆ. ರಾಜಕೀಯ ಒತ್ತಡಕ್ಕೆ ಮಣಿದ ಉಡುಪಿ ಪೊಲೀಸರು ಈಶ್ವರಪ್ಪನವರ ವಿಚಾರಣೆ ನಡೆಸದೇ ಕೇವಲ ಮೂರು ತಿಂಗಳಲ್ಲಿ ವರದಿ ಸಿದ್ಧಪಡಿಸಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯು ಈ ದೋಷಪೂರಿತ ವರದಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ತ್ಯಾಗ ಮಾಡಿಲ್ಲ, ಅವರನ್ನ ಪಕ್ಷದಿಂದ ದಬ್ಬಿದ್ರು: ಸಿಎಂ ಇಬ್ರಾಹಿಂ

ಡೆತ್‍ನೋಟ್ ಆಧಾರವಾಗಿಟ್ಟುಕೊಂಡು ಈಶ್ವರಪ್ಪನವರನ್ನು ಬಂಧಿಸಬೇಕು. ಸರ್ಕಾರ ಕೈಕೆಳಗೆ ಕಾರ್ಯನಿರ್ವಹಿಸುವ ಸಿಐಡಿ ಬದಲು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಈಶ್ವರಪ್ಪನವರು ಸಂತೋಷ್ ಪಾಟೀಲ್‍ರವರಿಗೆ ನೀಡಿದ ಕಿರುಕುಳ ಹಾಗೂ ವಂಚನೆಯು ರಾಜ್ಯದ ಜನತೆಗೆ ತಿಳಿಯಬೇಕು. ಈಶ್ವರಪ್ಪನವರ ನೇತೃತ್ವದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದ್ದು, ಈ ಬಗ್ಗೆ ಆಮ್ ಆದ್ಮಿ ಪಾರ್ಟಿ ಹೋರಾಟ ಮಾಡಿದ್ದರೂ ಯಾವುದೇ ಸೂಕ್ತ ತನಿಖೆ ನಡೆದಿಲ್ಲ. ಕೆ.ಜೆ.ಜಾರ್ಜ್ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆದಿದ್ದರೂ ಟೀಕಿಸುತ್ತಿದ್ದ ಬಿಜೆಪಿಯು ಈಗ ಈಶ್ವರಪ್ಪನವರ ವಿರುದ್ಧ ಪೊಲೀಸ್ ತನಿಖೆಯನ್ನೂ ಸರಿಯಾಗಿ ನಡೆಸದಿರುವುದು ದುರಂತ. ಆರ್‌ಡಿಪಿಆರ್‌ ಹಗರಣಗಳು ಹಾಗೂ ಸಂತೋಷ್ ಪ್ರಕರಣದ ಕುರಿತು ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಚನ್ನಪ್ಪಗೌಡ ನೆಲ್ಲೂರು ಒತ್ತಾಯಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *