ಉದ್ಧವ್‌, ಏಕನಾಥ್‌ ವೈಮನಸ್ಸಿಗೆ ಮರಾಠಿ ಸಿನಿಮಾ ಕಾರಣ?

ಬೆಳಗಾವಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ವೈಮನಸ್ಸಿಗೆ ಮರಾಠಿ ಸಿನಿಮಾ ಕಾರಣವಾಯ್ತಾ ಎಂಬ ಪ್ರಶ್ನೆ ಈಗ ಎದ್ದಿದೆ.

ಮಹಾರಾಷ್ಟ್ರ ರಾಜಕಾರಣದಲ್ಲಿ ಕ್ಷಿಪ್ರ ಕ್ರಾಂತಿ ಏಳಲು ಮೇ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ‘ಧರ್ಮವೀರ ಮುಕ್ಕಾಂ ಪೋಸ್ಟ್ ಥಾಣೆ’ ಸಿನಿಮಾವೂ ಒಂದು ಕಾರಣವಾಗಿರಬಹುದು ಎಂಬ ವಿಶ್ಲೇಷಣೆ ಈಗ ಕೇಳಿ ಬಂದಿದೆ.

ಶಿವಸೇನೆ ಪ್ರಭಾವಿ ಮುಖಂಡರಾಗಿದ್ದ ದಿ‌.ಆನಂದ ದಿಘೇ ಜೀವನಾಧಾರಿತ ‘ಧರ್ಮವೀರ’ ಚಿತ್ರ ಮೇ 13 ರಂದು ಬಿಡುಗಡೆಯಾಗಿತ್ತು. ಶಿವಸೇನೆಯ ಥಾಣೆ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ದಿ.ಆನಂದ ದಿಘೇಯ ‘ಧರ್ಮವೀರ’ ಚಿತ್ರದಲ್ಲಿನ ಕೆಲ ದೃಶ್ಯಗಳಿಗೆ ಉದ್ಧವ್ ಠಾಕ್ರೆ ಅಸಮಾಧಾನಗೊಂಡಿದ್ದರು ಎನ್ನಲಾಗುತ್ತಿದೆ.

ಶಿವಸೇನೆ ಮಾಜಿ ನಾಯಕರಾದ ನಾರಾಯಣ ರಾಣೆ, ರಾಜ್ ಠಾಕ್ರೆ ಕುರಿತ ದೃಶ್ಯಕ್ಕೆ ಅಸಮಾಧಾನಗೊಂಡಿದ್ದ ಉದ್ಧವ್‌ ಚಿತ್ರ ವೀಕ್ಷಣೆ ವೇಳೆ ಕ್ಲೈಮ್ಯಾಕ್ಸ್ ನೋಡದೇ ಹೊರಬಂದಿದ್ದರು. ಇದನ್ನೂ ಓದಿ: 55 ಶಾಸಕರು ನಮ್ಮ ಬಳಿ ಇದ್ದಾರೆ – ಉದ್ಧವ್ ಬೆದರಿಕೆಗೆ ಜಗ್ಗದ ರೆಬೆಲ್ಸ್

ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರಾಜ್ ಠಾಕ್ರೆ ಹಾಗೂ ದಿ‌.ಆನಂದ ದಿಘೇ ಸಂಭಾಷಣೆಯಿದೆ. ಅಪಘಾತದಲ್ಲಿ ಗಾಯವಾಗಿ ಆಸ್ಪತ್ರೆ ಸೇರಿದ್ದ ಆನಂದ ದಿಘೇ ಅವರನ್ನು ರಾಜ್ ಠಾಕ್ರೆ ಭೇಟಿಯಾಗುತ್ತಾರೆ. ಆ ವೇಳೆ ಅಂದು ಶಿವಸೇನೆ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿದ್ದ ರಾಜ್ ಠಾಕ್ರೆ,”ಹೀಗೆ ಮಲಗಿದ್ರೆ ಹೇಗೆ? ಹಿಂದುತ್ವದ ಕೆಲಸ ಇನ್ನೂ ಮಾಡಬೇಕಿದೆ” ಎಂದು ಆನಂದ್ ದಿಘೇ ಉದ್ದೇಶಿಸಿ ಹೇಳುತ್ತಾರೆ. ಈ ಪ್ರಶ್ನೆಗೆ “ಹಿಂದುತ್ವದ ಜವಾಬ್ದಾರಿ ಈಗ ನಿಮ್ಮ ಮೇಲಿದೆ” ಎಂದು ರಾಜ್ ಠಾಕ್ರೆಗೆ ಆನಂದ ದಿಘೇ ಉತ್ತರಿಸುತ್ತಾರೆ. ಚಿತ್ರದ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಂದೇ ಭಾರೀ ವೈರಲ್ ಆಗಿತ್ತು.

ಚಿತ್ರದಲ್ಲಿ ಬರುವ ಈ ದೃಶ್ಯದಿಂದ ಉದ್ಧವ್ ಠಾಕ್ರೆ – ಏಕನಾಥ್ ಶಿಂಧೆ ಮಧ್ಯೆ ವೈಮನಸ್ಸು ಹೆಚ್ಚಾಗಿದೆ ಎನ್ನಲಾಗುತ್ತಿದೆ. ದಿ.ಆನಂದ ದಿಘೇ ಕಟ್ಟಾ ಶಿಷ್ಯರಾಗಿರುವ ಏಕನಾಥ್ ಶಿಂಧೆ ಉದ್ಧವ್‌ ನಡೆಯಿಂದ ಮೊದಲೇ ಅಸಮಾಧಾನಗೊಂಡಿದ್ದರು. ಈ ಸಿನಿಮಾದ ಬಳಿಕ ಬಂಡಾಯದ ಕಿಚ್ಚು ಹೆಚ್ಚಾಯಿತು ಎಂಬ ವಿಚಾರ ಈಗ ಚರ್ಚೆ ಆಗುತ್ತಿದೆ.

Live Tv

Comments

Leave a Reply

Your email address will not be published. Required fields are marked *