ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ

ಕೋಲಾರ: ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆ ಸಂದರ್ಭ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ನಾನು ಯಾಕೆ ಅಡ್ಡ ಮತದಾನ ಮಾಡಿದೆ ಎಂಬುದಕ್ಕೆ ಈಗ ಹಳೆ ಕಥೆ ಬಿಚ್ಚಿಟ್ಟು ಶ್ರೀನಿವಾಸ್ ಗೌಡ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಶ್ರೀನಿವಾಸ್ ಗೌಡ, ನಿನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ. ಈ ಹಿನ್ನೆಲೆ ಜೆಡಿಎಸ್ ಮುಖಂಡರು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ ಎಂದು ತಿಳಿಸಿದರು.

7 ತಿಂಗಳ ಹಿಂದೆಯೇ ಪ್ರಜ್ವಲ್ ರೇವಣ್ಣ ಅವರು ನನ್ನನ್ನು ಉಚ್ಚಾಟನೆ ಮಾಡಿದ್ದರು. ಇದೀಗ ಜೆಡಿಎಸ್‌ನವರಿಗೆ ನನ್ನ ವಿಷಯದಲ್ಲಿ ಮಾತನಾಡುವ ಹಕ್ಕು ಇಲ್ಲ. ಅವರು ಉಚ್ಚಾಟನೆ ಮಾಡಿದ ಬಳಿಕ ನಾನು ಯಾವುದೇ ಪಕ್ಷಕ್ಕೂ ಹೋಗಬಹುದು ಎಂದು ಹೇಳಿದರು.

ನಾನೊಬ್ಬ ಹಿರಿಯ ಶಾಸಕನಾಗಿದ್ದರೂ ನನ್ನನ್ನು ಸಚಿವನನ್ನಾಗಿ ಮಾಡಿಲ್ಲ. ನಾನು ಮಂತ್ರಿಯಾಗಿದ್ದಾಗ ಕುಮಾರಸ್ವಾಮಿಯವರು ಶಾಸಕರೂ ಆಗಿರಲಿಲ್ಲ. ಇಂತಹ ಹಿರಿಯ ಶಾಸಕನನ್ನು ಪಕ್ಷ ಸರಿಯಾಗಿ ನೋಡಿಕೊಂಡಿಲ್ಲ. ನನ್ನ ಹಿನ್ನೆಲೆ ನೋಡಿಯಾದರೂ ಗೌರವ ನೀಡಬೇಕಿತ್ತು ಎಂದು ನುಡಿದರು. ಇದನ್ನೂ ಓದಿ: ಬಿಜೆಪಿ ‘ಎ’ ಟೀಂ ಅಂತ ಎಲ್ಲರೂ ಒಪ್ಪಿಕೊಂಡಾಗಿದೆ, ಬಿ ಟೀಂ ಯಾವುದಾದರೇನು: ಬೊಮ್ಮಾಯಿ

ನಾನು ಧರಂ ಸಿಂಗ್ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಅವರ ನಡತೆ ನ್ಯಾಯಯುತವಾಗಿರಲಿಲ್ಲ. ಈಗ ತಾಲೂಕು, ಜಿಲ್ಲಾ ಪಂಚಾಯತ್ ಎಲ್ಲದರಿಂದಲೂ ನಾನು ಹೊರ ಬಂದಿದ್ದೇನೆ. ನನ್ನ ಕೈಲಾದಮಟ್ಟಿಗೆ ಅಭಿವೃದ್ಧಿ ಮಾಡಿದ್ದೇನೆ. ಕೋಲಾರಕ್ಕೆ ರಿಂಗ್ ರಸ್ತೆ ಮಾಡಿಸುವ ಕನಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ – ಸುಳಿವು ಬಿಟ್ಟುಕೊಟ್ಟ ಅಶ್ವಥ್ ನಾರಾಯಣ್

2018ರಲ್ಲಿ ನನಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತಪ್ಪಿತ್ತು. ಕಾಂಗ್ರೆಸ್‌ನಲ್ಲಿ ಟಿಕೆಟ್ ಕೇಳಿದ್ದಾಗ ಮಿಸ್ ಆಯ್ತು ಎಂದು ಜೆಡಿಎಸ್‌ನಿಂದ ಸ್ಪರ್ಧೆಗೆ ನಿಂತಿದ್ದೆ. ವಿಧಾನಪರಿಷತ್ ಚುನಾವಣೆಯಲ್ಲಿ ಎಲ್ಲಾ ಶಾಸಕರಿಗೂ 50 ಲಕ್ಷ ರೂ. ನೀಡಲಾಗಿದೆ. ಅದನ್ನು ಎಲ್ಲಾ ಜೆಡಿಎಸ್ ಶಾಸಕರೂ ಪಡೆದಿದ್ದಾರೆ. ಆದರೆ ನಾನು ಪಡೆದಿಲ್ಲ ಎಂದು ಹೇಳಿಕೆ ನೀಡಿದರು.

Comments

Leave a Reply

Your email address will not be published. Required fields are marked *