ಪಿಎಸ್‍ಐ ನೇಮಕಾತಿ ಅಕ್ರಮ ವಿಚಾರ – 7ನೇ ರ‍್ಯಾಂಕ್ ಪಡೆದಿದ್ದ ಕಲಬುರಗಿ ಅಭ್ಯರ್ಥಿ ಸಿಐಡಿ ವಶಕ್ಕೆ

ಕಲಬುರಗಿ: ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‍ಐ) ನೇಮಕಾತಿಯಲ್ಲಿ ಭಾರೀ ಅಕ್ರಮದ ಹಿನ್ನೆಲೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಸೇಡಂ ಪಟ್ಟಣದ ಅಭ್ಯರ್ಥಿಯೊಬ್ಬನನ್ನು ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

545 ಪಿಎಸ್‍ಐ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದ ಹಿನ್ನೆಲೆ ಸಿಐಡಿ ತನಿಖೆ ನಡೆದಿದೆ. ಜಿಲ್ಲೆಯ ಠಾಣೆಯೊಂದರ ಎಎಸ್‍ಐ ಪುತ್ರ ವೀರೇಶ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮೂರು ಬಾರಿ ಪಿಎಸ್‍ಐ ಎಕ್ಸಾಂ ಬರೆದಿದ್ದ ವಿರೇಶ್, ಮೂರು ಬಾರಿಯೂ ಅರ್ಹತೆ ಪಡೆಯುವಲ್ಲಿ ವಿಫಲನಾಗಿದ್ದ. ವಯಸ್ಸು ಮೀರಿ ಹೋಗುತ್ತೆ ಅನ್ನೋದಕ್ಕೆ ಅಕ್ರಮವಾಗಿ ನೇಮಕಾತಿ ಪಡೆಯಲು ವಿರೇಶ್ ಮುಂದಾಗಿದ್ದ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿಯವರು ಗೊಂದಲ ಮೂಡಿಸುವ ಕೆಲಸ ಮಾಡಬಾರದು: ಬಿಎಸ್‍ವೈ

ಕಳೆದ ವರ್ಷ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ವಿರೇಶ್, ಕೇವಲ 20 ಪ್ರಶ್ನೆಗಳಿಗೆ ಉತ್ತರ ಬರೆದಿದ್ದ, ನಂತರ ಅಕ್ರಮದಿಂದ ಓಎಮ್‍ಆರ್ (ಆಪ್ಟಿಕಲ್ ಮಾರ್ಕ್ಸ್‌ ರೆಕಗ್ನಿಷನ್) ಸೀಟ್ ತರಸಿಕೊಂಡು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ 121 ಮಾರ್ಕ್ ಪಡೆಯುವ ಮೂಲಕ ಕಲ್ಯಾಣ ಕರ್ನಾಟಕ ಮಿಸಲು ಅನ್ವಯ 7 ನೇ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದ ಎನ್ನಲಾಗಿದೆ. ಅನುಮಾನಗೊಂಡ ಸಿಐಡಿ ಬೆಂಗಳೂರಿನಿಂದ ನೇರವಾಗಿ ಬಂದು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿರೇಶ‌ನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಶಾಸ್ತ್ರದ ಪ್ರಕಾರ ವಿಶ್ವಕರ್ಮ ಜನಾಂಗದವರೇ ದೇವರ ಪ್ರತಿಮೆ ಕೆತ್ತಬೇಕು: ಡಾ. ಜ್ಞಾನನಂದ

ವಿರೇಶ್ ಜೊತೆಗೆ ಇನ್ನೂ ಹಲವು ವಿದ್ಯಾರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸಿಐಡಿ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳ ಶೋಧ ಕಾರ್ಯ ಆರಂಭಿಸಿದ್ದಾರೆ. ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಅಕ್ರಮ ನೇಮಕಾತಿಯಲ್ಲಿ ಹಲವು ಪೊಲೀಸ್ ಅಧಿಕಾರಿಗಳು, ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಸೇರಿದಂತೆ ಹಲವರು ಭಾಗಿಯಾಗಿರುವ ಶಂಕೆ ಕೂಡಾ ಇದೆ.

Comments

Leave a Reply

Your email address will not be published. Required fields are marked *