ಡಿಎಂಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ತಮಿಳುನಾಡಿಗೆ ಪಾದಯಾತ್ರೆ ಯಾವಾಗ: ಡಿಕೆಶಿಗೆ ಬಿಜೆಪಿ ಪ್ರಶ್ನೆ

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡುನಲ್ಲಿರುವ ತಮ್ಮದೇ ಸರ್ಕಾರ ಕೈಗೊಂಡಿರುವ ತೀರ್ಮಾನದ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ಮೌನವಾಗಿರುವುದೇಕೆ ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದೆ.

ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ, ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ. ತಮ್ಮದೇ ಮೈತ್ರಿ ಪಕ್ಷದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏಕೆ ಮೌನವಾಗಿದ್ದಾರೆ? ತಮಿಳುನಾಡಿಗೆ ಪಾದಯಾತ್ರೆ ಮಾಡುವುದು ಯಾವಾಗ ಎಂದು ಕೇಳಿದೆ. ಇದನ್ನೂ ಓದಿ:  ಚುನಾವಣೆವರಗೆ ಸುಮ್ಮನಿದ್ದು, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ: ಡಿಕೆಶಿ

ರಾಹುಲ್ ಗಾಂಧಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆ ಇತ್ತೀಚೆಗೆ ವೇದಿಕೆ ಹಂಚಿಕೊಂಡಿದ್ದರು. ಆದರೆ ಅಧಿಕಾರದ ದಾಹದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಕರ್ನಾಟಕದ ಪರವಾಗಿ ಮಾತನಾಡಲು ಹಿಂಜರಿದರು. ಡಿಕೆಶಿವಕುಮಾರ್ ಅವರೇ, ಇಲ್ಲಿ ಪಾದಯಾತ್ರೆ ಮಾಡುವ ಬದಲು ತಮಿಳುನಾಡಿನ ಕಡೆಗೆ ಪಾದ ಬೆಳೆಸಿದ್ದರೆ ಏನಾದರೂ ಲಾಭವಾಗುತ್ತಿತ್ತಲ್ಲವೇ ಎಂದಿದ್ದಾರೆ.

ರಾಜಕೀಯ ಲಾಭಕ್ಕಾಗಿ ಡಿಕೆಶಿ ಅವರು ಒಂದಲ್ಲ ಎರಡು ಬಾರಿ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ. ಎರಡು ಬಾರಿ ಸುಳ್ಳಿನ ಜಾತ್ರೆ ಮಾಡಿ ಅಭ್ಯಾಸವಿರುವ ಡಿಕೆಶಿ ಅವರಿಗೆ ಮತ್ತೊಂದು ಬಾರಿ ಪಾದಯಾತ್ರೆ ಮಾಡುವುದು ಕಷ್ಟವೇನಲ್ಲ. ಮೂರನೇ ಬಾರಿ ರಾಜ್ಯದ ಹಿತದೃಷ್ಟಿಯಿಂದ ತಮಿಳುನಾಡು ಕಡೆಗೆ ಪಾದಯಾತ್ರೆ ಮಾಡಿ. ನಿರೀಕ್ಷಿಸಬಹುದೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ

ಮೇಕೆದಾಟು ಪಾದಯಾತ್ರೆಯ ಮೂಲಕ ಬೆಂಗಳೂರಿನ 15ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಿರುವುದಾಗಿ ಡಿಕೆಶಿ ಹೇಳಿದ್ದಾರೆ. ಅದು ನೀರಿಗಾಗಿ ಅಲ್ಲ, ರಾಜಕೀಯ ಲಾಭಕ್ಕಾಗಿ ಎಂಬುದು ಡಿಕೆಶಿ ಅವರ ಹೇಳಿಕೆಯಲ್ಲೇ ಸ್ಪಷ್ಟವಾಗುತ್ತದೆ. ಹೋಳಿ ಹಬ್ಬ ಮುಗಿದಿದೆ, ಕಾಂಗ್ರೆಸ್ಸಿಗರ ನಿಜ ಬಣ್ಣ ಬಯಲಾಗುತ್ತಿದೆ.

Comments

Leave a Reply

Your email address will not be published. Required fields are marked *