ನರಬಲಿಗಾಗಿ 7 ವರ್ಷದ ಕಂದಮ್ಮ ಅಪಹರಣ – ಇಬ್ಬರು ಅರೆಸ್ಟ್

ಲಕ್ನೋ: ಹೋಳಿ ಹಬ್ಬದಂದು ‘ನರಬಲಿ’ ನೀಡಬೇಕೆಂದು 7 ವರ್ಷದ ಬಾಲಕಿಯನ್ನು ಅಪಹರಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.

ನೋಯ್ಡಾದಲ್ಲಿ ಹೋಳಿ ಹಬ್ಬದ ದಿನ ನರಬಲಿ ಕೊಡಬೇಕು ಎಂದು ಏಳು ವರ್ಷದ ಬಾಲಕಿಯನ್ನು ಅಪಹರಿಸಲಾಗಿದೆ. ಆದರೆ, ಆರೋಪಿಗಳ ಜಾಲವನ್ನು ಭೇದಿಸಿದ ಪೊಲೀಸರು ಬಾಗ್ಪತ್ ಜಿಲ್ಲೆಯಿಂದ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ಬಾಲಕಿಯನ್ನು ಅಪಹರಿಸಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ: ಅಸ್ಸಾಂ ಸಿಎಂ

ನೋಯ್ಡಾ ಉಪ ಪೊಲೀಸ್ ಆಯುಕ್ತ ಹರೀಶ್ ಚಂದರ್ ಈ ಕುರಿತು ಮಾಹಿತಿ ನೀಡಿದ್ದು, ಮಾರ್ಚ್ 13 ರಂದು ಬಾಲಕಿ ನಾಪತ್ತೆಯಾಗಿದ್ದಳು. ಸೆಕ್ಟರ್ 63 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಛಿಜಾರ್ಸಿಯಲ್ಲಿ ಸ್ಥಳೀಯರು ಬಾಲಕಿಯನ್ನು ಹುಡುಕಿದರು. ಆದರೆ ಬಾಲಕಿ ಪತ್ತೆಯಾಗಿಲ್ಲ. ಈ ಹಿನ್ನೆಲೆ ಬಾಲಕಿಯ ಪೋಷಕರು ಪೊಲೀಸರನ್ನು ಸಂಪರ್ಕಿಸಿದರು ಎಂದು ತಿಳಿಸಿದರು.

ಪೋಷಕರು ದೂರು ನೀಡಿದ ಮೇಲೆ ಐಪಿಸಿ ಸೆಕ್ಷನ್ 363 ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿಯನ್ನು ಪರಿಶೀಲನೆ ಮಾಡಲಾಯಿತು. ಈ ವೇಳೆ ಆರೋಪಿಗಳ ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಲಾಯಿತು ಎಂದು ವಿವರಿಸಿದರು.

ಬಂಧಿತರನ್ನು ಸೋನು ವಾಲ್ಮಿಕಿ ಮತ್ತು ನೀತು ಎಂದು ಗುರುತಿಸಲಾಗಿದೆ. ಸತೇಂದ್ರ ಸೇರಿದಂತೆ ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಬಂಧಿತ ಆರೋಪಿಗಳು ಯಾವುದೇ ಅಪರಾಧದ ಇತಿಹಾಸ ಹೊಂದಿಲ್ಲದಿದ್ದರೂ ಆಗಾಗ್ಗೆ ಮದ್ಯ ಸೇವಿಸುತ್ತಿದ್ದರು ಎಂದು ಹೇಳಿದರು.

ನಡೆದಿದ್ದೇನು?

ಬಾಲಕಿ ವಾಸಿಸುತ್ತಿದ್ದ ಪಕ್ಕದ ಮನೆಯಲ್ಲಿಯೇ ಸೋನು ವಾಸಿಸುತ್ತಿದ್ದು, ಅವಿವಾಹಿತನಾಗಿದ್ದನು. ಈ ಹಿನ್ನೆಲೆ ಸೋನು ಸತೇಂದ್ರನನ್ನು ಸಂಪರ್ಕಿಸಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾನೆ. ಆಗ ಸತೇಂದ್ರ, ಹೋಳಿಯಲ್ಲಿ ನರಬಲಿ ಕೊಟ್ಟರೆ ಮದುವೆಯಾಗುವುದಾಗಿ ಹೇಳಿದ್ದಾನೆ. ಈ ಪರಿಣಾಮ 7 ವರ್ಷದ ಬಾಲಕಿಯನ್ನು ಸೋನು ಅಪಹರಿಸಿದ್ದು, ನರಬಲಿಗೆ ಎಲ್ಲ ಸಿದ್ಧತೆ ನಡೆದಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ‘ಕಾಪಾಡಿ ಕಾಪಾಡಿ’ ಎಂದು ಚೀರಾಡಿದ್ರು ಮಾನವೀಯತೆ ಮರೆತ ಜನರು – ಮೂವರು ಸಾವು 

ಬಾಲಕಿಯನ್ನು ರಕ್ಷಿಸಿ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ 50,000 ರೂ. ಘೋಷಿಸಿದ್ದಾರೆ.

Comments

Leave a Reply

Your email address will not be published. Required fields are marked *