ತಮಿಳುನಾಡಿನ ವಿದ್ಯಾರ್ಥಿಗಳ ರಕ್ಷಣೆಗಾಗಿ ವಿದೇಶಕ್ಕೆ ತೆರಳಲು ಸಿದ್ಧರಾದ ಮೂವರು ಎಂಪಿಗಳು

ಚೆನ್ನೈ: ರಷ್ಯಾ, ಉಕ್ರೇನ್ ಯುದ್ಧದ ನಡುವೆ ಅಪಾಯದಲ್ಲಿರುವ ತಮಿಳುನಾಡು ಮೂಲದ ವಿದ್ಯಾರ್ಥಿಗಳ ರಕ್ಷಣೆಗೆ ತಮಿಳುನಾಡಿನಿಂದ ವಿದೇಶಕ್ಕೆ ತೆರಳಲು ಮೂವರು ಡಿಎಂಕೆ ಸಂಸದರು ಮತ್ತು ಓರ್ವ ಶಾಸಕ ಮುಂದಾಗಿದ್ದಾರೆ.

ಉಕ್ರೇನ್‍ನಲ್ಲಿರುವ ತಮಿಳುನಾಡಿನ ವಿದ್ಯಾರ್ಥಿಗಳ ರಕ್ಷಣೆಗಾಗಿ ಹಂಗೇರಿ, ರೊಮೇನಿಯಾ ಪೋಲೆಂಡ್ ಮತ್ತು ಸ್ಲೋವಾಕಿಯಾಗೆ ತಮಿಳುನಾಡಿನ ಸಂಸದರಾದ ತಿರುಚಿ ಶಿವ, ಕಲಾನಿಧಿ ವೀರಸಾಮಿ, ಎಂ.ಎಂ ಅಬ್ದುಲ್ಲ, ಶಾಸಕ ಟಿ.ಆರ್.ಬಿ ರಾಜಾ ಮತ್ತು ಐಎಎಸ್ ಅಧಿಕಾರಿಗಳ ತಂಡ ತೆರಳಲು ಸಿದ್ಧವಾಗಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ – ದಕ್ಷಿಣ ಏಷ್ಯಾ ರಾಷ್ಟ್ರಗಳು ಯಾರ ಪರ?

ಉಕ್ರೇನ್‍ನಲ್ಲಿ ತಮಿಳುನಾಡಿನ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ರಷ್ಯಾ ಘೋಷಿರುವ ಯುದ್ಧದಿಂದಾಗಿ ಉಕ್ರೇನ್‍ನಲ್ಲಿ ಅಪಾಯದಲ್ಲಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಭಾರತೀಯರ ರಕ್ಷಣೆಗೆ ಮುಂದಾಗಿದೆ. ಆದರೆ ತಮಿಳುನಾಡಿನ ವಿದ್ಯಾರ್ಥಿಗಳು ಸಾಕಷ್ಟು ಮಂದಿ ಅಪಾಯದಲ್ಲಿರುವುದನ್ನು ಅರಿತು ಸ್ಟಾಲಿನ್ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ಮೂವರು ಎಂಪಿಗಳು, ಓರ್ವ ಶಾಸಕ ಮತ್ತು ಐಎಎಸ್ ಅಧಿಕಾರಿಗಳ ತಂಡ ಭಾರತದ ರಕ್ಷಣಾ ಕಾರ್ಯಚರಣೆಗೆ ಸಹಕರಿಸಲು ಮತ್ತು ತಮಿಳುನಾಡಿನ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆದುಕೊಂಡು ಬರಲು ಸಹಕರಿಸಲಿದೆ ಎಂದು ತಮಿಳುನಾಡಿನ ಸರ್ಕಾರಿ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

ಈಗಾಗಲೇ ಸ್ಟಾಲಿನ್ ನೇತೃತ್ವದಲ್ಲಿ ಸಭೆ ಕೂಡ ನಡೆದಿದ್ದು, ತಮಿಳುನಾಡಿನ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ಲಾನ್ ರೂಪಿಸಿಕೊಂಡಿದೆ. ತಮಿಳುನಾಡು ಸರ್ಕಾರ ಹೆಲ್ಪ್‍ಲೈನ್ ತೆರೆದಿದ್ದು, ಈಗಾಗಲೇ 3 ಸಾವಿರಕ್ಕೂ ಹೆಚ್ಚು ಫೋನ್ ಕಾಲ್, 4 ಸಾವಿರಕ್ಕೂ ಹೆಚ್ಚು ಇ-ಮೇಲ್‍ಗಳನ್ನು ತಮಿಳುನಾಡು ಸರ್ಕಾರ ರಿಸೀವ್ ಮಾಡಿದೆ. ಇಂದು 193 ತಮಿಳುನಾಡು ಮೂಲದ ವಿದ್ಯಾರ್ಥಿಗಳೂ ದೆಹಲಿಗೆ ಬಂದಿಳಿದಿದ್ದಾರೆ ಎಂದು ತಮಿಳುನಾಡು ಸರ್ಕಾರ ಸ್ಪಷ್ಟಪಡಿಸಿದೆ.

Comments

Leave a Reply

Your email address will not be published. Required fields are marked *