ನವೀನ್ ಭಾವಚಿತ್ರಕ್ಕೆ ಹೂವು ಹಾಕಿ, ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸ್ತಿರೋ ಜನ

ಹಾವೇರಿ: ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಬಲಿಯಾಗಿರುವ ಹಾವೇರಿ ಮೂಲದ ನವೀನ್ ಭಾವಚಿತ್ರಕ್ಕೆ ಜನ ಹೂ ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ್ ಮನೆಯಲ್ಲಿ ನೀರವ ಮೌನ ಆವರಿಸಿದೆ. ಮಗನನ್ನ ಕಳೆದುಕೊಂಡು ದಿಕ್ಕು ತೋಚದಂತೆ ತಂದೆ ಕುಳಿತಿದ್ದಾರೆ. ಇನ್ನೊಂದೆಡೆ ಸಂಬಂಧಿಕರು ಮನೆಗೆ ಧಾವಿಸುತ್ತಿದ್ದಾರೆ. ಅಲ್ಲದೆ ಮನೆಯ ಮುಂದೆ ನವೀನ್ ಫೊಟೋ ಇಡಲಾಗಿದ್ದು, ಅದಕ್ಕೆ ಹೂ ಹಾಕಿ, ಶ್ರದ್ಧಾಂಜಲಿ ಸಲ್ಲಿಸಿ, ಫೋಟೋಗೆ ಕೈಮುಗಿದು ನಮಸ್ಕರಿಸುತ್ತಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ನವೀನ್ ತಂದೆ ಶೇಖರಗೌಡ, ನಿನ್ನೆ ಪ್ರಧಾನಿಗಳು ಮಾಜಿ ಸಿಎಂ, ಹಾಲಿ ಸಿಎಂ ಎಲ್ಲರೂ ನಮ್ಮ ಜೊತೆ ಮಾತಾಡಿದ್ದಾರೆ. ಜೀವಂತವಾಗಿ ದೇಶಕ್ಕೆ ನನ್ನ ಮಗ ಬರಲಿಲ್ಲ. ಸಾವಿರಾರು ವಿದ್ಯಾರ್ಥಿಗಳನ್ನು ಸೇಫ್ ಆಗಿ ಕರೆ ತನ್ನಿ ಅಂತ ನಾನು ಮೋದಿಯವರಿಗೆ ರಿಕ್ವೆಸ್ಟ್ ಮಾಡಿದ್ದೀನಿ. ನಿನ್ನೆ ಸಾಕಷ್ಟು ಅಧಿಕಾರಿಗಳು, ಮುಖಂಡರು ಬಂದು ಮಾತಾಡಿದ್ದಾರೆ ಎಂದರು. ಇದನ್ನೂ ಓದಿ: ನವೀನ್ ಕುಟುಂಬಕ್ಕೆ ಪರಿಹಾರ ಕೊಡ್ತೀವಿ: ಬೊಮ್ಮಾಯಿ

ಉಕ್ರೇನ್ ನಲ್ಲಿ ಬಂಕರ್ ನಲ್ಲಿ ಉಳಿದ ವಿದ್ಯಾರ್ಥಿಗಳು ಬರೋಕೆ ಹೆದರ್ತಾ ಇದ್ದಾರೆ. ಮಗನನ್ನು ಯಾವಾಗ ಕರೆಸ್ತೀರಿ ಅಂದಾಗ ಮೊದಲು ಎಲ್ಲರೂ ಕೇವಲ ಆಶ್ವಾಸನೆ ಕೊಡುತ್ತಿದ್ದರು. ಅವನು ಬರೋದು ಯಾರಿಂದ ತಪ್ಪಿತು, ಯಾರಿಂದ ಆಯ್ತು ಅಂತ ನಂಗೆ ಗೊತ್ತಾಗಲಿಲ್ಲ. ಪೋಲೆಂಡ್, ರೋಮೇನಿಯಾ ಮೂಲಕ ಅವನು ಬರಬೇಕಿತ್ತು. ಜೀವ ರಕ್ಷಣೆಗೆ ಅಂತ ಬಹಳ ಪ್ರಯತ್ನ ಮಾಡಿದ್ರು ನನ್ನ ಮಗ. ಬಂಕರ್ ನಲ್ಲಿ ಇದ್ರೂ ಕಷ್ಟ, ಹೊರ ಬಂದ್ರೂ ಕಷ್ಟ ಅಂತ ಅವರು ಒದ್ದಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ರಷ್ಯಾ ದಾಳಿಗೆ ಮೃತಪಟ್ಟ ಕನ್ನಡಿಗ ನವೀನ್ ಮೃತದೇಹ ಪತ್ತೆ

ಯುದ್ಧ ಆಗೋದು ಸುಳ್ಳು, ಧೈರ್ಯವಾಗಿರಿ ಅಂತ ಕಾಲೇಜಿನವರು ಹೇಳಿದ್ರಂತೆ. ಹೀಗಾಗಿ ಯುದ್ಧ ಆಗಲ್ಲ ಅನ್ನೋ ವಿಶ್ವಾಸದಲ್ಲಿ ಎಲ್ಲರೂ ಇದ್ದರು. ಇಲ್ಲಿನ ರಾಜಕೀಯ, ರಿಸರ್ವೇಶನ್, ಶಿಕ್ಷಣ ಪದ್ಧತಿ ಸರಿ ಇಲ್ಲದ ಕಾರಣ ನಮ್ಮ ಮಗ ಇಲ್ಲಿ ಓದೋಕೆ ಆಗಲಿಲ್ಲ ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿರುವ ಭಾರತೀಯರನ್ನು ಭೇಟಿಯಾಗಿ ಧೈರ್ಯ ತುಂಬಿದ ಸಿಂಧಿಯಾ

Comments

Leave a Reply

Your email address will not be published. Required fields are marked *