ಫೋಟೋಸ್, ರೀಲ್ಸ್ ಮಾಡ್ಕೊಂಡು ಸ್ಕೂಟಿಯಲ್ಲಿ ಜಾಲಿ ಟ್ರಿಪ್- ಬಸ್ ಡಿಕ್ಕಿಯಾಗಿ ಮೂವರು ದುರ್ಮರಣ

ಚಿಕ್ಕಬಳ್ಳಾಪುರ: ಖಾಸಗಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ತಂದೆ, ತಾಯಿ ಹಾಗೂ ಮಗ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ನಡೆದಿದೆ.

ಬೆಂಗಳೂರು ಮೂಲದ ದಂಪತಿ ಗೌಸ್(37), ಅಮ್ಮಾಜಾನ್(33) ಹಾಗೂ ಇವರ ಮಗ ರಿಯಾನ್(13) ಮೃತರು. ಗೌಸ್ ಮೂಲತಃ ಹೊಸಪೇಟೆಯವರು ಹಾಗೂ ಅಮ್ಮಾಜಾನ್ ಆಂಧ್ರಪ್ರದೇಶದ ಕದಿರಿಯದವರು. ಇವರು ಮದುವೆಯಾದ ನಂತರ ಬೆಂಗಳೂರಿಗೆ ಬಂದು ವಾಸ ಮಾಡುತ್ತಿದ್ದರು. ಗೌಸ್ ಸೆಕೆಂಡ್ ಹ್ಯಾಂಡ್ ಬೈಕ್ ತಗೊಂಡು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು.

ಇಂದು ಬೆಳಗ್ಗೆ ಗೌಸ್, ಅಮ್ಮಾಜಾನ್ ಹಾಗೂ ಮಗ ರಾಯಾನ್ ಮೂವರು ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಸ್ಕೂಟಿಯಲ್ಲಿ ಅಮ್ಮಾಜಾನ್ ಅವರ ತಂಗಿ ಮನೆ ಕದಿರಿಗೆ ಹೊರಟಿದ್ದರು. ಮಾರ್ಗಮಧ್ಯೆ ಫೋಟೋಸ್ ತೆಗೆದುಕೊಂಡು, ರೀಲ್ಸ್ ಮಾಡಿಕೊಂಡು ಸ್ಕೂಟಿಯಲ್ಲಿ ಜಾಲಿಟ್ರಿಪ್ ಮಾಡುತ್ತಿದ್ದರು.

ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಬಳಿ ಬೆಂಗಳೂರು ಕಡೆಯಿಂದ ಬರುತ್ತಿದ್ದವರು ತಿಂಡಿ ತಿನ್ನಲು ರಸ್ತೆ ಬದಿಯಲ್ಲಿರುವ ಹೋಟೆಲ್‍ಗೆ ಬೈಕ್ ತಿರುಗಿಸಿದ್ದಾರೆ. ಹೋಟೆಲ್‍ನಲ್ಲಿ ತಿಂಡಿ ತಿಂದು ಮರಳಿ ಬಾಗೇಪಲ್ಲಿ ಕಡೆಗೆ ಯೂಟರ್ನ್ ತೆಗೆದುಕೊಂಡಿದ್ದಾರೆ. ಆದರೆ ಅಷ್ಟರಲ್ಲೇ ಬಾಗೇಪಲ್ಲಿ ಕಡೆಯಿಂದ ಬಂದ ಖಾಸಗಿ ಬಸ್ ಸ್ಕೂಟಿ ಮೇಲೆ ಎರಗಿದೆ.

ಇದರ ಪರಿಣಾಮ ಸ್ಕೂಟಿ ಬಸ್ ಕೆಳಗೆ ಸಿಲುಕಿ ನಜ್ಜುಗುಜ್ಜಾಗಿ ಬಸ್ ಡಿವೈಡರ್ ಮೇಲೆ ಹತ್ತಿದೆ. ಬಸ್ ಕೆಳಗೆ ಸಿಲುಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಇದನ್ನೂ ಓದಿ: ಟೂತ್‌ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಳು

ಅಪಘಾತ ನಂತರ ಬಸ್ ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಅಪಘಾತ ಮುನ್ನ ದಂಪತಿ ಮಗನ ಸಮೇತ ಮಾಡಿತೋ ರೀಲ್ಸ್, ಫೋಟೋಸ್ ನೋಡಿದ್ರೆ ಅಯ್ಯೋ ಪಾಪ ಅನಿಸದೆ ಇರದು. ಚಿಕ್ಕಬಳ್ಳಾಪುರ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒಂದು ಯುದ್ಧದಿಂದ ತಪ್ಪಿಸಿಕೊಂಡು ಉಕ್ರೇನ್‍ಗೆ ಬಂದ್ರೆ ಇನ್ನೊಂದು ಯುದ್ಧ ಪ್ರಾರಂಭವಾಗಿದೆ: ಅಫ್ಘಾನ್ ನಿವಾಸಿ

Comments

Leave a Reply

Your email address will not be published. Required fields are marked *