ಹಿಜಬ್‌ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಡಿಕೆಶಿ ಆದೇಶಕ್ಕೆ ಕಿಮ್ಮತ್ತಿಲ್ಲವೇ: ಬಿಜೆಪಿ ಪ್ರಶ್ನೆ

ಬೆಂಗಳೂರು: ಹಿಜಬ್‌ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಿರುವ ಶಾಸಕ ಜಮೀರ್‌ ಅಹ್ಮದ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಖಡಕ್‌ ಸೂಚನೆ ನೀಡಿದ್ದರೂ, ಕಾಂಗ್ರೆಸ್‌ ನಾಯಕರು ಹಿಜಬ್‌ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಹಾಗಾದರೆ ಡಿಕೆಶಿ ಆದೇಶಕ್ಕೆ ಕಿಮ್ಮತ್ತಿಲ್ಲವೇ ಎಂದು ಬಿಜೆಪಿ ಲೇವಡಿ ಮಾಡಿದೆ. ಇದನ್ನೂ ಓದಿ: ಹಿಜಬ್ ಹೈಡ್ರಾಮಾ ನೋಡಿ ಕೇಸರಿ ಶಾಲು ತೆಗೆದ ವಿದ್ಯಾರ್ಥಿ

ಬಿಜೆಪಿ ಟ್ವೀಟ್‌ನಲ್ಲೇನಿದೆ?
ಹಿಜಬ್ ವಿಚಾರದ ಬಗ್ಗೆ ಚರ್ಚಿಸುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಿರಿಯ ನಾಯಕರ ಸಭೆ ಕರೆದಿದ್ದಾರೆ. ಹಿಜಬ್ ಬಗ್ಗೆ ಯಾರೂ ಮಾತನಾಡಬಾರದು ಎಂಬ ಡಿ.ಕೆ.ಶಿವಕುಮಾರ್‌ ಆದೇಶಕ್ಕೆ ಸಿದ್ದರಾಮಯ್ಯ ಉಲ್ಟಾ ಹೊಡೆದಿದ್ದಾರೆ. ಅಸಮರ್ಥ ರಾಜ್ಯಾಧ್ಯಕ್ಷ ಡಿಕೆಶಿ ಅವರೀಗ ಹತಾಶೆಗೆ ಬಿದ್ದಿದ್ದಾರೆ.

ಹಿಜಾಬ್ ಬಗ್ಗೆ ಮಾತನಾಡಬಾರದು ಎಂದು ಜಮೀರ್ ಅವರಿಗೆ ಡಿಕೆಶಿ ಕಟ್ಟಪ್ಪಣೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಅವರು ಪಕ್ಷದ ವೇದಿಕೆಯಲ್ಲೇ ಹಿಜಾಬ್ ಸಭೆ ಕರೆದಿದ್ದಾರೆ. ಅದಕ್ಕೆ ಜಮೀರ್ ಅವರನ್ನೂ ಆಹ್ವಾನಿಸಿದ್ದಾರೆ. ಹಾಗಾದರೆ ಡಿಕೆಶಿ ಆದೇಶಕ್ಕೆ ಕಿಮ್ಮತ್ತಿಲ್ಲವೇ ಎಂದು ಬಿಜೆಪಿ ಟ್ವೀಟ್‌ ಮಾಡಿ ಪ್ರಶ್ನಿಸಿದೆ. ಇದನ್ನೂ ಓದಿ: ಹಿಜಬ್ ವಿವಾದದ ನಡುವೆಯೇ ಮಾದರಿಯಾದ ಮುಸ್ಲಿಂ ಶಿಕ್ಷಣ ಸಂಸ್ಥೆ

ಹಿಜಬ್‌ ವಿಚಾರವಾಗಿ ಉಡುಪಿ ಕಾಲೇಜೊಂದರಲ್ಲಿ ಹಿಜಬ್‌ ವಿವಾದ ಶುರುವಾಯಿತು. ಹಿಜಬ್‌ ವಿರೋಧಿಸಿ ವಿದ್ಯಾರ್ಥಿಗಳ ಗುಂಪು ಕೇಸರಿ ಶಾಲು ಧರಿಸಿದ್ದು, ವಿವಾದ ಹೋರಾಟದ ಸ್ವರೂಪ ಪಡೆಯಿತು. ಸದ್ಯ ಹಿಜಬ್‌ ವಿವಾದ ಹೈಕೋರ್ಟ್‌ ವಿಚಾರಣೆಯಲ್ಲಿದೆ. ಆದರೆ ಇಡೀ ವಿಶ್ವದಾದ್ಯಂತ ಹಿಜಬ್‌ ಹೋರಾಟ ಸದ್ದು ಮಾಡಿದೆ.

Comments

Leave a Reply

Your email address will not be published. Required fields are marked *