ಬಾಹುಬಲಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಶ್ರವಣಬೆಳಗೊಳದಲ್ಲಿ ಮೌನ ಪ್ರತಿಭಟನೆ

ಹಾಸನ: ಮೈಸೂರಿನ ರಾಜಕಾರಣಿಯೊಬ್ಬರು ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಸ್ವಾಮಿಯವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವುದುದನ್ನು ವಿರೋಧಿಸಿ ಹಾಸನದಲ್ಲಿ ಮೌನ ಪ್ರತಿಭಟನೆ ನಡೆದಿದೆ.

ಶ್ರವಣಬೆಳಗೊಳದ ದಿಗಂಬರ ಜೈನ ಸಮಾಜ, ಮಹಿಳಾ ಸಮಾಜ, ಬ್ರಾಹ್ಮಣ ಸಮಾಜ, ವರ್ತಕರ ಸಂಘ, ರೈತ ಸಂಘ ಹಾಗೂ ಕ್ಷೇತ್ರದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಗುರುವಾರ ಆಯೋಜಿಸಿದ್ದ ಮೌನ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಅಹಿಂಸೆಯಿಂದ ಸುಖ ತ್ಯಾಗದಿಂದ ಶಾಂತಿ ಎಂಬ ಸಂದೇಶವನ್ನು ಜಗತ್ತಿಗೆ ನೀಡುತ್ತಿರುವ ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಮಾತುಗಳಿಂದ ಶ್ರವಣಬೆಳಗೊಳದ ಸಮಸ್ತ ಜನತೆಗೆ ಅಪಮಾನ ಮಾಡಿದಂತಾಗಿದೆ. ಆದ್ದರಿಂದ ಮೌನ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ಗಮನಹರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು ಹಾಗೂ ಮುಂದೆಂದೂ ಈ ರೀತಿಯ ಘಟನೆಗಳು ನಡೆಯದಿರಲಿ ಎಂದು ಗೊಮ್ಮಟೇಶ್ವರ ಭಗವಾನ್ ಬಾಹುಬಲಿ ಸ್ವಾಮಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಲೇಜುಗಳಿಗೆ ಯಾರೂ ಧಾರ್ಮಿಕ ಬಟ್ಟೆಗಳನ್ನು ಧರಿಸಿ ಹೋಗುವಂತಿಲ್ಲ: ಹೈಕೋರ್ಟ್‌ ಮಧ್ಯಂತರ ಆದೇಶ

ಶ್ರೀಕ್ಷೇತ್ರ ಸೋಂದಾ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರು ಮಾತನಾಡಿ, ವಿಶ್ವಕ್ಕೆ ಶಾಂತಿ ಮತ್ತು ಹಿಂಸೆಯನ್ನು ಸಾರುತ್ತಿರುವ ಗೊಮ್ಮಟೇಶ್ವರ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಅವರ ಬಗ್ಗೆ ಈ ರೀತಿ ಮಾತನಾಡಿರುವುದು ಜನಸಾಮಾನ್ಯರಿಗೆ ನೋವುಂಟುಮಾಡಿದೆ. ಇನ್ನೂ ಮುಂದೆ ಜೈನ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಹೇಳಿಕೆಗಳು ಕೇಳಿಬರಬಾರದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ

ಗ್ರಾಮ ಪಂಚಾಯತ್ ಸದಸ್ಯ ಅಫ್ತಾಬ್ ಪಾಷಾ ಮಾತನಾಡಿ, ಯಾವುದೇ ಧರ್ಮದ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ಕುರಾನ್‍ನಲ್ಲೇ ಉಲ್ಲೇಖವಿದೆ. ಅವರು ಈ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. ಇದನ್ನೂ ಓದಿ: ಹಿಜಬ್ ನಮ್ಮ ಕುಟುಂಬದ ವಿವಾದ ಪಾಕಿಸ್ತಾನ ತಲೆಹಾಕಬಾರದು: ಫಾತಿಮಾ ಹುಸೇನ್ ಆಕ್ರೋಶ

ಶ್ರೀಜೈನ ಮಠದ ಆವರಣದಿಂದ ಸುಮಾರು 500ಕ್ಕೂ ಹೆಚ್ಚು ಜನರು ಮೌನ ಮೆರವಣಿಗೆ ಹೊರಟು ನಾಡಕಚೇರಿಗೆ ತೆರಳಿ ಉಪ ತಹಶೀಲ್ದಾರ್ ನಂಜೇಗೌಡ ಹಾಗೂ ಪೊಲೀಸ್ ಉಪ ನಿರೀಕ್ಷಕ ಸ್ವಾಮಿಯವರಿಗೆ ದೂರು ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಎನ್.ಅಶೋಕ್ ಕುಮಾರ್, ಡಾ. ಬಿ.ಆರ್.ಯುವರಾಜ್, ದಮ್ಮನಿಂಗಳ ಶ್ರೀನಿವಾಸ್, ರೈತ ಸಂಘದ ಜಿಲ್ಲಾಧ್ಯಕ್ಷ ಮಂಜಣ್ಣ, ಎಸ್.ಆರ್.ಲೋಕೇಶ್, ಎಸ್.ಪಿ.ಭಾನುಕುಮಾರ್, ಯಶಸ್, ಜಿ.ಪಿ.ನೇಮಿಶ್ ಕುಮಾರ್, ಎಸ್.ಎಂ.ಕಿರಣ್, ಜಿ.ಪಿ.ಜಿನೇಶ್, ಎಸ್.ಎಸ್.ಶ್ರೇಯಸ್, ರಾಜು, ಪೂರ್ಣಿಮಾ ಅನಂತಪದ್ಮನಾಭ್, ಎಸ್.ಪಿ.ಮಹೇಶ್ ಮುಂತಾದವರಿದ್ದರು.

Comments

Leave a Reply

Your email address will not be published. Required fields are marked *