ಆಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದ ಸೀರಿಯಲ್ ತಂಡಕ್ಕೆ ಪ್ಯಾಕಪ್ ಹೇಳಿದ ಪೊಲೀಸರು

ಚಿಕ್ಕಮಗಳೂರು: ರಾಜ್ಯಾದ್ಯಂತ ವೀಕ್ ಎಂಡ್ ಲಾಕ್‍ಡೌನ್ ಮಧ್ಯೆಯೂ ಜನ ರಸ್ತೆಗೆ ಇಳಿದು ಪೊಲೀಸರ ಕೈಗೆ ಸಿಕ್ಕಿ ನರಳಾಡಿದ್ದಾರೆ. ಧಾರಾವಾಹಿಯ ತಂಡದವರು ನಮಗೂ ವೀಕ್ ಎಂಡ್ ಲಾಕ್‍ಡೌನ್‍ಗೂ ಸಂಬಂಧವಿಲ್ಲದಂತೆ ಬಜ್ಜಿ, ಪಾನಿಪೂರಿ ತಿಂದುಕೊಂಡು ಸದ್ದಿಲ್ಲದೆ ಶೂಟಿಂಟ್‍ನಲ್ಲಿ ಬ್ಯುಸಿಯಾಗಿದ್ದಾರೆ.

ಸರ್… ಆಂಟಿ ಮನೆಗೆ ಹೋಗ್ತಿದ್ದೇನೆ. ಅತ್ತೆ ಮನೆಗೆ ಹೋಗಿ ಬರುತ್ತಿದ್ದೇನೆ. ಅಜ್ಜಿ ಫೋಟೋಗೆ ಫ್ರೇಮ್ ಹಾಕ್ಸೋಕ್ಕೆ ಹೋಗ್ತೀದಿನಿ, ಮಟನ್, ಕೊತ್ತಂಬರಿ ಸೊಪ್ಪು ತರಬೇಕು ನಾನಾ ರೀತಿಯ ಸಬೂಬು ಹೇಳಿಕೊಂಡು ರಸ್ತೆಗಿಳಿದ ಜನಸಾಮಾನ್ಯರು ಪೊಲೀಸರ ಕೈಗೆ ಸಿಕ್ಕಿ ಗಾಡಿ ಸೀಜ್ ಮಾಡಿಸಿಕೊಂಡು ಸರ್… ಬಿಡಿ ಸರ್… ಎಂದು ಗೋಳಾಡಿದ್ದಾರೆ. ಆದರೆ, ಧಾರಾವಾಹಿಯ ತಂಡದವರು ನಮಗೂ ವೀಕ್ ಎಂಡ್ ಕರ್ಫ್ಯೂಗೂ ಸಂಬಂಧವಿಲ್ಲದಂತೆ ಸದ್ದಿಲ್ಲದೆ ಶೂಟಿಂಟ್ ಮಾಡುತ್ತಿದ್ದರು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದ ಕಾಫಿ ಕೆಫೆ ಕಾರ್ನರ್‌ನಲ್ಲಿ ಸೀರಿಯಲ್ ಟೀಂ ಸಂಜೆ ವೇಳೆಯ ಶೂಟಿಂಗ್‍ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಸಂಜೆ ವೇಳೆ ಬಜ್ಜಿ ಹಾಗೂ ಪಾನಿಪೂರಿ ತಿನ್ನುವ ಸನ್ನಿವೇಶದ ಚಿತ್ರೀಕರಣಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ, ವಿಷಯ ತಿಳಿದ ಬಣಕಲ್ ಸಬ್‍ಇನ್ಸ್‌ಪೆಕ್ಟರ್‌ ಗಾಯತ್ರಿ ಸ್ಥಳಕ್ಕೆ ಭೇಟಿ ನೀಡಿ ಶೂಟಿಂಗ್‍ಗೆ ಆಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದ ಸೀರಿಯಲ್ ತಂಡಕ್ಕೆ ಪ್ಯಾಕಪ್ ಹೇಳಿದ್ದಾರೆ. ಇದನ್ನೂ ಓದಿ: ವಿಕೇಂಡ್ ಕರ್ಫ್ಯೂನಲ್ಲಿ ಮತ್ತೆ ಕೊತ್ತಂಬರಿ ಸೊಪ್ಪು, ಮಟನ್ ತರೋರದ್ದೇ ಕಾರುಬಾರು

ವೀಕ್ ಎಂಡ್ ಲಾಕ್‍ಡೌನ್ ಮಧ್ಯೆಯೂ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡಕ್ಕೆ ಕ್ಲಾಸ್ ತೆಗೆದುಕೊಂಡು ಫೈನ್ ಹಾಕಿದ್ದಾರೆ. ಚಿತ್ರೀಕರಣದ ಸ್ಥಳದಲ್ಲಿ ಅಂದಾಜು 50 ಜನರಿದ್ದು, ಕೆಲವರು ಕಾರಿನಲ್ಲಿ ಕೂತಿದ್ದರು. ಮತ್ತಲವರು ಶೂಟಿಂಟ್‍ಗೆ ರೆಡಿಯಾಗುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಕ್ಯಾಮೆರಾಮೆನ್ ಟ್ರೈಪಾಡ್ ಸಮೇತ ಕ್ಯಾಮರಾವನ್ನು ತೆಗೆದುಕೊಂಡು ಹೋಗಿ ಗಾಡಿಯಲ್ಲಿ ಇಟ್ಟಿದ್ದಾರೆ. ಚಿತ್ರೀಕರಣಕ್ಕಾಗಿ ಕಾಫಿ ಕಾರ್ನರ್ ಸುತ್ತಲೂ ಲೈಟ್ ಹಾಕಿ ಎಲ್ಲಾ ಸಿದ್ಧತೆ ಮಾಡಿದ್ದರು. ಪಾನಿಪೂರಿ, ಬಜ್ಜಿ ಕೂಡ ರೆಡಿ ಇತ್ತು. ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ಪೊಲೀಸರು ಎಲ್ಲರನ್ನೂ ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್‌ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್

Comments

Leave a Reply

Your email address will not be published. Required fields are marked *